ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ–ಮಗು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಂಧನ ಇಲಾಖೆ, ಮುಂಬರುವ ದಿನಗಳಲ್ಲಿ ಇಂಥ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ವಿದ್ಯುತ್ ಪ್ರಸರಣ ನಿಗಮಗಳಿಗೆ ನಿರ್ದೇಶನ ನೀಡಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಇಂಧನ ಇಲಾಖೆ, ‘ತಾಯಿ–ಮಗು ಸಾವಿಗೆ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಅವಘಡ ಅತ್ಯಂತ ದುರದೃಷ್ಟಕರ. ಇಂಥ ಅವಘಡಗಳಲ್ಲಿ ಜೀವಹಾನಿ ಆಗುತ್ತಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಹೇಳಿದರು.
ಸರ್ಕಾರ ನೀಡಿರುವ ನಿರ್ದೇಶನಗಳು:
* ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿವಳಿಕೆ ತರಬೇತಿ ನೀಡಬೇಕು
* ವಿದ್ಯುತ್ ಅವಘಡಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ವಾಹಿನಿಗಳು, ರೇಡಿಯೊ, ಪತ್ರಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು
* ಸುರಕ್ಷತಾ ನಿಯಮಗಳ ಅನ್ವಯ ಕಾಲ ಕಾಲಕ್ಕೆ ತಪಾಸಣೆ ನಡೆಸಬೇಕು. ನ್ಯೂನತೆಗಳು ಇದ್ದರೆ, ವರದಿ ಸಿದ್ಧಪಡಿಸಿ ಸಲ್ಲಿಸಬೇಕು
* ವಿದ್ಯುತ್ ಜಾಲ ಹಾಗೂ ಉಪಕರಣಗಳನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕು
* ಉಪಕೇಂದ್ರಗಳ ವ್ಯಾಪ್ತಿಯಲ್ಲಿ 11 ಕೆ.ವಿ ಮಾರ್ಗಗಳು ಒಸಿಆರ್ ಮತ್ತು ಇಎಫ್ಆರ್ ಮೂಲಕ ಟ್ರಿಪ್ ಆದಾಗ ಸಂಬಂಧಪಟ್ಟ ಶಾಖಾಧಿಕಾರಿ/ಉಪವಿಭಾಗಾಧಿಕಾರಿ ಸಂಪರ್ಕಿಸಿ ಅವರ ಸಹಮತದೊಂದಿಗೆ ಟೆಸ್ಟ್ ಚಾರ್ಜ್ ಮಾಡಬೇಕು
* ತಿಂಗಳಿಗೊಮ್ಮೆ ಸುರಕ್ಷತಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು