ಬೆಂಗಳೂರು: ವನ್ಯಜೀವಿ–ಮಾನವ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳಿಗೆ ರಾತ್ರಿಯ ಬದಲು ಹಗಲು ಹೊತ್ತಿನಲ್ಲಿ ಮಾತ್ರ ತ್ರೀಫೇಸ್ ವಿದ್ಯುತ್ ಒದಗಿಸುವಂತೆ ಮುಖ್ಯಮಂತ್ರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಖಂಡ್ರೆ, ರಾಜ್ಯದ ಹಲವು ಕಡೆಗಳಲ್ಲಿ ಕಾಡಿನಂಚಿನ ಪ್ರದೇಶಗಳಿಗೆ ಆನೆ, ಹುಲಿ, ಚಿರತೆ ಸೇರಿ ಹಲವು ಕಾಡುಪ್ರಾಣಿಗಳು ಬರುತ್ತಿವೆ. ರಾತ್ರಿ ವೇಳೆ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಜೀವಹಾನಿಗೆ ಕಾರಣವಾಗುತ್ತಿದೆ ಎಂದಿದ್ದಾರೆ.
ರಾತ್ರಿಯ ವೇಳೆ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಪಂಪ್ಸೆಟ್ ಮೋಟರ್ ಆನ್ ಮಾಡಲು ಮತ್ತು ಆಫ್ ಮಾಡಲು ರಾತ್ರಿಯ ವೇಳೆ ಸಂಚರಿಸುವ ಕಾರಣ ಸಂಘರ್ಷ ಹೆಚ್ಚುತ್ತದೆ. ಹೀಗಾಗಿ ಬೆಳಗಿನ ಹೊತ್ತು ತ್ರೀಫೇಸ್ ವಿದ್ಯುತ್ ಪೂರೈಸುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಅವರು ತಿಳಿಸಿದ್ದಾರೆ.
ಆದ್ದರಿಂದ, ಈ ಕುರಿತು ಇಂಧನ ಇಲಾಖೆಗೆ ನಿರ್ದೇಶನ ನೀಡುವಂತೆ ಇಂಧನ ಸಚಿವರಿಗೂ ಖಂಡ್ರೆ ಮನವಿ ಮಾಡಿದ್ದಾರೆ.