ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿಸಹಕಾರ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಬಾಕಿ ಇರುವ ಕೃಷಿ ಸಾಲ ವಸೂಲಿಗೆ ನೀಡಿದ್ದ ಆದೇಶಕ್ಕೆ ಸರ್ಕಾರ ಬುಧವಾರ ತಡೆ ನೀಡಿದೆ.
ಸುಸ್ತಿ ಸಾಲ ಮರುಪಾವತಿಸು ವಂತೆ ರೈತರನ್ನು ಯಾವುದೇ ಕಾರಣಕ್ಕೂ ಬಲವಂತ ಮಾಡಬಾರದು ಎಂದು ಆದೇಶಿಸಿದೆ.
ರಾಜ್ಯದಲ್ಲಿ ನೆರೆಯಿಂದ ಜನರು ತತ್ತರಿಸಿದ್ದು, ಮತ್ತೊಂದೆಡೆ ಬರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂತಹ ಸಮಯದಲ್ಲಿ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವುದಕ್ಕೆ ಕಾಂಗ್ರೆಸ್, ಜೆಡಿಎಸ್, ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಲ ವಸೂಲಿ ಆದೇಶಕ್ಕೆ ತಡೆ ನೀಡಲಾಗಿದೆ.
‘ಸಾಲ ವಸೂಲಾತಿ ಆದೇಶವನ್ನು ತಡೆಹಿಡಿಯುವಂತೆ ಸಹಕಾರ ಸಚಿವರು ಆದೇಶಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಹಕಾರ ಸಂಘಗಳ ನಿಬಂಧಕ ಎನ್.ಎಸ್.ಪ್ರಸನ್ನ ಕುಮಾರ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
‘ಅತಿವೃಷ್ಟಿ, ಅನಾವೃಷ್ಟಿ ಪೀಡಿತ ರೈತರಿಂದ ಬಲವಂತವಾಗಿಬಾಕಿ ಸಾಲ ವಸೂಲಿ ಮಾಡುವ ದುಸ್ಸಾಹಸವನ್ನು ತಕ್ಷಣ ನಿಲ್ಲಿಸದಿದ್ದರೆ ರೈತರ ಜತೆ ಸೇರಿ ಪ್ರತಿಭಟನೆ ನಡೆಸಲಾಗುವುದು’ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದರು.