ಮೈಸೂರು: ‘ಭ್ರೂಣಹತ್ಯೆ ಪ್ರಕರಣ ದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಲೋಪ ಕಾಣುತ್ತಿದ್ದು, ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಈ ಹಿಂದೆ ಇಲ್ಲಿ ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ರವಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚಿಸಿರುವೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಇದು ರಾಜ್ಯದಾದ್ಯಂತ ಇರುವ ಜಾಲ. ನಮ್ಮ ಇಲಾಖೆಯಲ್ಲಿ ಆಗಿರುವ ಲೋಪದ ಬಗ್ಗೆ ಮುಚ್ಚುಮರೆ ಇಲ್ಲ’ ಎಂದರು.
‘ದಾಖಲೆ ಪ್ರಕಾರ 270 ಭ್ರೂಣಹತ್ಯೆ ನಡೆದಿದೆ. ಹೆಚ್ಚೂ ಆಗಿರಬಹುದು. ಎಷ್ಟು ವರ್ಷದಿಂದ ನಡೆದಿದೆಯೆಂಬುದು ಗೊತ್ತಿಲ್ಲ. ಬಂಧಿತರಾಗಿರುವವರು ಯಾರೂ ವೈದ್ಯರಲ್ಲ. ಎಲ್ಲ ಲ್ಯಾಬ್ ಟೆಕ್ನೀಷಿಯನ್ಗಳು. ಮೈಸೂರು ಮಾತಾ ಆಸ್ಪತ್ರೆ ಮಾಲೀಕ ಚಂದನ್ ಬಲ್ಲಾಳ್ ಕೂಡ ವೈದ್ಯನಲ್ಲ’ ಎಂದರು.
ಉದಯಗಿರಿಯ ಮಾತಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಡಾ.ರಾಜೇಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಈಗ್ಯಾಕೆ ನೋಟಿಸ್ ಅಂಟಿಸಿದ್ದೀರ? ಇಲ್ಲಿ ಆಸ್ಪತ್ರೆಯಿತ್ತೆಂದು ಗೊತ್ತಿರಲಿಲ್ಲವಾ’ ಎಂದು ಪ್ರಶ್ನಿಸಿದರು.