ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸಾಗುತ್ತಿದ್ದ ಪರ್ಸೀನ್ ದೋಣಿಯೊಂದರಲ್ಲಿ ಬುಧವಾರ ಬೆಂಕಿ ಅವಘಡವಾಗಿದೆ. ಆರು ಮೀನುಗಾರರ ಮೈಕೈ ಸುಟ್ಟಿದ್ದು, ಅವರ ಪೈಕಿ ಮೂವರಿಗೆ ಹೆಚ್ಚಿನ ಗಾಯಗಳಾಗಿವೆ. ಅವರೆಲ್ಲರೂ ಒಡಿಶಾದವರು.
ವಾಮನ್ ಹರಿಕಂತ್ರ ಎನ್ನುವವರಿಗೆ ಸೇರಿದ ‘ಜಲಪದ್ಮ’ ಹೆಸರಿನ ಈ ದೋಣಿಯಲ್ಲಿ 20ಕ್ಕೂ ಹೆಚ್ಚು ಮಂದಿ ಮೀನುಗಾರರು ಇದ್ದರು. ಕಡಲ ತೀರದಿಂದ ಸುಮಾರು 6 ಕಿ.ಮೀ. ದೂರದ ಅಂಜದೀವ್ ದ್ವೀಪದ ಸಮೀಪ ಬರುತ್ತಿದ್ದಂತೆ ದೋಣಿಯ ಬ್ಯಾಟರಿ ಸ್ಫೋಟಗೊಂಡಿತು. ಇದರಿಂದ ದೋಣಿಯ ಎಂಜಿನ್ ಧಗಧಗನೆ ಹೊತ್ತಿ ಉರಿಯಿತು.
ಸಮೀಪದಲ್ಲಿದ್ದ ಇನ್ನೊಂದು ದೋಣಿಯ ಮೀನುಗಾರರು ಎಲ್ಲರನ್ನೂ ರಕ್ಷಿಸಿ ಬೈತಖೋಲ್ ಬಂದರಿಗೆ ಕರೆ ತಂದರು. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಗಾಹುತಿಯಾದ ದೋಣಿಯನ್ನು ದಡಕ್ಕೆ ತರಲಾಗುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದರಿಗೆ ಧಾವಿಸಿದ್ದಾರೆ.