ಬೆಂಗಳೂರು: ಸಾರ್ವಜನಿಕರು ತಮ್ಮ ಬಳಿ ಇರಿಸಿಕೊಂಡಿರುವ ಹುಲಿ ಉಗುರು, ಆನೆ ದಂತ ಸೇರಿದಂತೆ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಮೂರು ತಿಂಗಳ ಕಾಲಾವಕಾಶ ನೀಡುವ ಪ್ರಸ್ತಾವವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, 'ಜನರು ಅರಿವಿದ್ದೋ, ಇಲ್ಲದೆಯೋ ತಮ್ಮ ಬಳಿ ಇರಿಸಿಕೊಂಡಿರುವ ವನ್ಯಜೀವಿಗಳ ಅಂಗಾಂಗಗಳನ್ನು ಸರ್ಕಾರದ ವಶಕ್ಕೆ ಪಡೆದು ನಾಶಪಡಿಸಲಾಗುವುದು. ಇದಕ್ಕಾಗಿ ಮೂರು ತಿಂಗಳ ಅವಧಿ ನೀಡಲಾಗುವುದು. ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಮಂಡಿಸಿ, ಅನುಮೋದನೆ ಪಡೆಯಲಾಗುವುದು' ಎಂದರು.
ಈಗಾಗಲೇ ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ ವನ್ಯಜೀವಿ ಅಂಗಾಂಗಗಳನ್ನೂ ನಾಶಪಡಿಸಲಾಗುವುದು. ಮೈಸೂರಿನ ಅರಣ್ಯ ಇಲಾಖೆ ಸಂಗ್ರಹಾಗಾರದಲ್ಲಿ ದಾಸ್ತಾನು ಮಾಡಲಾಗಿರುವ ವನ್ಯಜೀವಿಗಳ ಅಂಗಾಂಗಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ನಾಶಪಡಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.