ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಗೊತ್ತಾದ ಕಾರಣ ರಾಜ್ಯದಲ್ಲಿ ಐದು ಗ್ಯಾರಂಟಿಗಳಿಗೆ ಸಂಚಕಾರ ಬಂದಿದೆ. ಕಳೆದ ಮೂರು ತಿಂಗಳಿಂದ ಅಕ್ಕಿ ಬದಲಿಗೆ ಕೊಡುತ್ತಿದ್ದ ಹಣದ ಪಾವತಿಯನ್ನು ಸರ್ಕಾರ ನಿಲ್ಲಿಸಿದೆ ಎಂದು ಬಿಜೆಪಿ ದೂರಿದೆ.
‘ರಾಜ್ಯದ ಜನತೆಗೆ 10 ಕೆ.ಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ’ ಎಂದು ಕುಟುಕಿದೆ.
‘10 ಕೆ.ಜಿ ಅಕ್ಕಿಯೂ ಇಲ್ಲ, ಅಕ್ಕಿ ಬದಲು ದುಡ್ಡೂ ಇಲ್ಲ. ಇದೊಂದು ರೀತಿ ಉಂಡು ಹೋದ ಕೊಂಡೂ ಹೋದ ಅಪರಾವತಾರ. ಸಿದ್ದರಾಮಯ್ಯ ಅವರೇ, ಮೂರು ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ, ದುಡ್ಡು ಕೊಡ್ತೀರೋ ಇಲ್ವೋ ಅನ್ನೂದನ್ನು ಹೇಳಿ’ ಎಂದು ‘ಎಕ್ಸ್’ ಮೂಲಕ ಪ್ರಶ್ನಿಸಿದೆ.