ಬೆಂಗಳೂರು: ಹಲವು ಬಗೆಯ ಸೂಕ್ಷ್ಮಜೀವಿಗಳು ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿರುವುದು ಗಂಭೀರ ಬೆಳವಣಿಗೆ. ಇದರಿಂದ ಸಾರ್ವಜನಿಕ ಆರೋಗ್ಯ ಏರುಪೇರಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದಲ್ಲೂ ಈ ಸಮಸ್ಯೆ ಗಂಭೀರವಾಗಿದೆ. ಇದರ ಪರಿಣಾಮ ಸಾಮಾನ್ಯ ಸೋಂಕುಗಳಿಗೂ ನೀಡುವ ಚಿಕಿತ್ಸೆ ಮತ್ತು ಔಷಧಗಳು ಪರಿಣಾಮ ಬೀರುತ್ತಿಲ್ಲ. ಇದರಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ ಎಂದು ವಿಶ್ವ ಸೂಕ್ಷ್ಮಜೀವಿಗಳ ಪ್ರತಿರೋಧಕ ಜಾಗೃತಿ ಸಪ್ತಾಹದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ವಿಷಯದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಔಷಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವ ಸೂಕ್ಷ್ಮಾಣುಗಳ ಹರಡುವಿಕೆ ಕಡಿಮೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಅಭಿಯಾನ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ರೈತರು ಯಾವುದೇ ನಿಯಂತ್ರಣವಿಲ್ಲದೇ, ರಸಗೊಬ್ಬರ, ಔಷಧ ಬಳಸುತ್ತಿದ್ದಾರೆ. ಕೋಳಿ ಫಾರಂಗಳಲ್ಲಿ ಇವುಗಳ ಬಳಕೆಗೆ ಯಾವುದೇ ಲಗಾಮು ಇಲ್ಲ. ಇಂತಹ ಔಷಧಗಳ ಖರೀದಿಯ ಮೇಲೂ ಕಡಿವಾಣ ಹಾಕಬೇಕು ಎಂದು ದಿನೇಶ್ ಹೇಳಿದರು.