ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೆಟ್ಟರ್‌ಗೆ ಐಟಿ, ಇಡಿ ಭಯ ತೋರಿಸಿರಬಹುದು: ಪ್ರಿಯಾಂಕ್ ಖರ್ಗೆ

Published 26 ಜನವರಿ 2024, 9:40 IST
Last Updated 26 ಜನವರಿ 2024, 9:40 IST
ಅಕ್ಷರ ಗಾತ್ರ

ಕಲಬುರಗಿ: ‘ಕೇಂದ್ರ ಸರ್ಕಾರ ಜಗದೀಶ್ ಶೆಟ್ಟರ್ ಅವರಿಗೆ ಐಟಿ, ಇಡಿ ಭಯ ತೋರಿಸಿದ್ದರಿಂದ ಅವರು ದಿಢೀರ್ ಆಗಿ ಬಿಜೆಪಿ ಸೇರ್ಪಡೆಯಾಗಿರಬಹುದು‘ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಐಟಿ–ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಂಶಯ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಐಟಿ, ಇಡಿ, ಸಿಬಿಐಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಶೆಟ್ಟರ್ ಅವರನ್ನು ಸೆಳೆಯಲು ಇದೇ ತಂತ್ರ ಅನುಸರಿಸಿರಬಹುದು. ಶೆಟ್ಟರ್ ಅವರನ್ನು ನಮ್ಮ ಪಕ್ಷ ಗೌರವಯುತವಾಗಿಯೇ ನಡೆಸಿಕೊಂಡಿತ್ತು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ವಿಧಾನಪರಿಷತ್ ಸ್ಥಾನವನ್ನು ನೀಡಲಾಗಿತ್ತು‘ ಎಂದರು.

‘ಬಿಜೆಪಿಗೆ ಇಡಿ, ಐಟಿ, ಸಿಬಿಐಗಳೇ ಸ್ಟಾರ್ ಕ್ಯಾಂಪೇನರ್‌ಗಳಾಗಿದ್ದಾರೆ. ಇವುಗಳನ್ನು ಬಿಟ್ಟರೆ ಬಿಜೆಪಿಯವರಿಗೆ ಗತಿ ಇಲ್ಲ. ತಾಕತ್ತಿದ್ದರೆ ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿಗಳನ್ನು ಛೂ ಬಿಡದೇ ಚುನಾವಣೆ ಎದುರಿಸಲಿ ನೋಡೋಣ‘ ಎಂದು ಸವಾಲು ಹಾಕಿದರು.

‘‌ಎಂಥ ಭ್ರಷ್ಟ ವ್ಯಕ್ತಿಯೇ ಇರಲಿ, ಆತ ಬಿಜೆಪಿ ವಾಷಿಂಗ್‌ ಮಷಿನ್‌ನಲ್ಲಿ ಹಾದು ಹೋದರೆ ಶುಭ್ರನಾಗುತ್ತಾನೆ‘ ಎಂದು ವ್ಯಂಗ್ಯವಾಡಿದರು.

‘ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದನ್ನು ಮುಖ್ಯಮಂತ್ರಿ ಅವರೇ ನಿರ್ಧಾರ ಮಾಡುತ್ತಾರೆ‘ ಎಂದು ಪ್ರಿಯಾಂಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸೆಳೆಯಲು ಯತ್ನಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸವದಿ ಅವರು ಸಹಜವಾಗಿಯೇ ಭೇಟಿ ಮಾಡಿದ್ದಾರೆ. ನಾನೂ ಆಗಾಗ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT