ನವದೆಹಲಿ: ಸಿ.ಡಿ. ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ) ರಚನೆಯನ್ನು ಪ್ರಶ್ನಿಸಿಅತ್ಯಾಚಾರ ಆರೋಪ ಮಾಡಿದ್ದಯುವತಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಮೇಲ್ಮನವಿಯ ವಿಚಾರಣೆಯು ಫೆಬ್ರುವರಿ 14ರಂದು ಸೋಮವಾರ ಸುಪ್ರೀಂ ನಲ್ಲಿ ವಿಚಾರಣೆಗೆ ಬರಲಿದೆ.
‘ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ’ ಎಂದು ತಿಳಿಸಿದ್ದ ಎಸ್ಐಟಿಯು ಬೆಂಗಳೂರಿನ ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು.
‘ಶಾಸಕ ರಮೇಶ ಜಾರಕಿಹೊಳಿ ಅವರು ಕೆಲಸದ ಆಮಿಷವೊಡ್ಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಯುವತಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಸರ್ಕಾರ ರಚಿಸಿದ್ದ ಎಸ್ಐಟಿ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.
ಕಳೆದ ವಾರ (ಫೆಬ್ರುವರಿ 4) ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದ್ದರಿಂದ, ಎಸ್ಐಟಿ ರಚನೆಯನ್ನೇ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.
‘ಸರ್ಕಾರವು ಸ್ವಯಂ ಪ್ರೇರಿತವಾಗಿ ಎಸ್ಐಟಿಯನ್ನು ರಚನೆ ಮಾಡಿಲ್ಲ. ಎಸ್ಐಟಿ ರಚನೆಯೇ ಸರಿ ಇಲ್ಲದಿರುವಾಗ ಆರೋಪಿಯು ನಿರ್ದೋಷಿ ಎಂಬ ವರದಿಯನ್ನು ಸಲ್ಲಿಸಿರುವುದನ್ನು ಒಪ್ಪಲಾಗದು. ಆ ವರದಿಯ ಮೇಲೆ ನಮಗೆ ನಂಬಿಕೆ ಇಲ್ಲ’ಎಂದು ಅರ್ಜಿದಾರರು ದೂರಿದ್ದಾರೆ.
ತನಿಖಾ ವರದಿಯನ್ನು ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.