ಚಿಕ್ಕಬಳ್ಳಾಪುರ: ‘ಡಾ.ಕೆ.ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಾನೇ ಕಾರಣ. ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ನಾನೇ ಪ್ರಮುಖ ಪಾತ್ರವಹಿಸಿದೆ’ ಎಂದು ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು.
ಮಂಚೇನಹಳ್ಳಿಯಲ್ಲಿ ಮಂಗಳ ವಾರ ಡಾ.ಕೆ.ಸುಧಾಕರ್ ಪರ ನಡೆದ ರೋಡ್ ಶೋ ನಲ್ಲಿ ಅವರು ಮಾತನಾಡಿದರು. ‘ಸುಧಾಕರ್ ಅವರು ರಾಜಕೀಯ ವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ರಾಜೀನಾಮೆಗೆ ನಾನೇ ಪ್ರೋತ್ಸಾಹಿಸಿದೆ’ ಎಂದರು.
ರಾಜ್ಯ ಬಿಜೆಪಿ ಸರ್ಕಾರದ ಮುಂದಿನ ಹಾದಿ ಸುಗಮವಾಗಿಲ್ಲ. ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿವರಿಗೆ ಹೆಚ್ಚಿನ ಬಲ ತುಂಬಬೇಕು. ಸರ್ಕಾರಕ್ಕೆ ದೊಡ್ಡ ಹೊಣೆಗಾರಿಕೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಉತ್ತುಂಗಕ್ಕೆ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್ ರಾತ್ರೋರಾತ್ರಿ ಮೈತ್ರಿ ಮಾಡಿಕೊಂಡವು. ಆದರೆ ಸೂಪರ್ ಸಿ.ಎಂ ಎಚ್.ಡಿ.ರೇವಣ್ಣ ಅವರಿಂದ ರಾಜ್ಯ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಯಿತು’ ಎಂದರು.ರೋಡ್ ಶೋ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಪಾಲ್ಗೊಂಡಿದ್ದರು.