ಬೆಂಗಳೂರು: ‘ಖಾಸಗಿ ದೂರು ಮತ್ತು ಅದೇ ದೂರಿಗೆ ಸಂಬಂಧಿಸಿದಂತೆ ಮತ್ತೊಂದು ಕೋರ್ಟ್ನಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ಅಂತಹ ಎರಡೂ ಪ್ರಕರಣಗಳನ್ನು ಜಂಟಿಯಾಗಿಸಿ ಒಂದೇ ಕೋರ್ಟ್ನಲ್ಲಿ ವಿಚಾರಣೆ ನಡೆಸಬಹುದು’ ಎಂದು ಹೈಕೋರ್ಟ್, ಸ್ಥಿರಾಸ್ತಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆದೇಶಿಸಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಎಂಪ್ಲಾಯಿಸ್ ಕೋ ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್ ಹಾಗೂ ಶ್ರೀ ಮಾಯಾ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಈ ಪ್ರಕರಣದಲ್ಲಿ ಖಾಸಗಿ ದೂರು ಮತ್ತು ಪೊಲೀಸರು ದಾಖಲಿಸಿರುವ ಎರಡೂ ಪ್ರಕರಣಗಳು ಒಂದೇ ವಿಷಯ ಹಾಗೂ ಸಂಗತಿಗಳನ್ನು ಆಧರಿಸಿವೆ. ಎರಡೂ ವಿಚಾರಣೆಗಳನ್ನು ಪ್ರತ್ಯೇಕವಾಗಿ ನಡೆಯಲು ಬಿಟ್ಟರೆ ಸಿಆರ್ಪಿಸಿ ಕಲಂ 300ರ ಅನ್ವಯ ಒಂದು ವಿಚಾರಣೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ. ಜತೆಗೆ ಇದು ಗೊಂದಲಕ್ಕೂ ಕಾರಣವಾಗುತ್ತದೆ. ಎರಡೂ ಪ್ರಕರಣಗಳ ವಿಚಾರಣೆಗಳನ್ನು ಒಟ್ಟಿಗೇ ನಡೆಸುವುದರಿಂದ ಪಕ್ಷಗಾರರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿದಂತಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಿಚಾರಣೆಯನ್ನು ರಾಮನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ.