ಬೆಂಗಳೂರು: ‘ಕಾವೇರಿ ಕಣಿವೆ ಪ್ರದೇಶದಲ್ಲಿ ನಮಗೆ 106 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು, ಸದ್ಯಕ್ಕೆ 56 ಟಿಎಂಸಿ ಅಡಿ ನೀರು ಇದೆ. ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು, ಮುಂದೆ ಯಾವುದೇ ಬಿತ್ತನೆ, ನಾಟಿ ಮಾಡಬಾರದು ಎಂದು ರೈತರಿಗೆ ಸೂಚಿಸಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಎರಡು ದಿನ ಮಳೆ ಸುರಿದ ಕಾರಣ ಅ. 1ರಂದು 13 ಸಾವಿರ, 2ರಂದು 23 ಸಾವಿರ, 3ರಂದು 20 ಸಾವಿರ, 4ರಂದು 15 ಸಾವಿರ, 5ರಂದು 10 ಸಾವಿರ ಕ್ಯೂಸೆಕ್ ನೀರು ಒಳಹರಿವು ಮೂಲಕ ಕೆಆರ್ಎಸ್ನಲ್ಲಿ ಸಂಗ್ರಹವಾಗಿದೆ ’ ಎಂದರು.
‘ಮುಂದಿನ ತಿಂಗಳು ಮಳೆ ಬೀಳುವ ಸಾಧ್ಯತೆ ಇದೆ. ಇದು ಸಂಕಷ್ಟದ ವರ್ಷ’ ಎಂದರು.
‘ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೇವೆ. ಮೇಕೆದಾಟು ಯೋಜನೆ ಜಾರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಅನುಮತಿ ಪಡೆಯಲು ಸಿದ್ಧತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.