ಮೈಸೂರು: ‘ವಚನ ಸಾಹಿತ್ಯ, ಬಸವ ಸಾಹಿತ್ಯವನ್ನು ಪ್ರಚುರಪಡಿಸಿರುವ ಮುರುಘಾ ಶರಣರು ಪ್ರಾಮಾಣಿಕವಾಗಿ ತನಿಖೆಗೆ ಒಳಪಡಬೇಕು. ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು. ಸರ್ಕಾರವೂ ನ್ಯಾಯಪರ ಧೋರಣೆ ತಾಳಬೇಕು’ ಎಂದು ಒಡನಾಡಿ ಸಂಸ್ಥೆಯ ಸಂಚಾಲಕರಾದ ಸ್ಟ್ಯಾನ್ಲಿ ಮತ್ತು ಪರಶುರಾಂ ಆಗ್ರಹಿಸಿದ್ದಾರೆ.
‘ಈ ಪ್ರಕರಣ ಸಮಾಜ ತಲೆತಗ್ಗಿಸುವ ವಿಚಾರ. ಧರ್ಮ, ಜಾತಿ, ಕುಲದ ನೆಪದಲ್ಲಿ ಸಮರ್ಥಿಸದೆ, ಜನ ಪ್ರತಿಭಟಿಸ ಬೇಕು. 4–5 ವರ್ಷದಿಂದ ಮಕ್ಕಳು ಕಿರುಕುಳ ಎದುರಿಸಿದ್ದು, ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುವುದು’ ಎಂದರು.
‘ರಾಜ್ಯ, ಕೇಂದ್ರ ಮಕ್ಕಳ ಹಕ್ಕುಗಳ ಆಯೋಗ, ಸಂಘ–ಸಂಸ್ಥೆಗಳು ಹೋರಾಟದಲ್ಲಿ ಭಾಗಿಯಾಗಬೇಕು, ನಿಷ್ಪಕ್ಷಪಾತ ತನಿಖೆಯಾಗಿ, ಸತ್ಯಾಂಶ ಹೊರಬರಬೇಕು’ ಎಂದರು.
ಶಿಕ್ಷಣ ಇಲಾಖೆಯಲ್ಲೂ ಸಂಚಲನೆ:ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಾಖಲಾಗುತ್ತಿದ್ದಂತೆ, ಶಿಕ್ಷಣ ಇಲಾಖೆಯಲ್ಲೂ ಸಂಚಲನೆ ಮೂಡಿತ್ತು.
ಸ್ವಾಮೀಜಿ ಹೆಸರು ಉಲ್ಲೇಖಿಸದೇ ’ಪ್ರಜಾವಾಣಿ‘ಯಲ್ಲಿ ಶನಿವಾರ ವರದಿ ಪ್ರಕಟವಾದ ಬಳಿಕ ಉನ್ನತ ಅಧಿಕಾರಿಯೊಬ್ಬರು ಮೈಸೂರಿನ ಡಿಡಿಪಿಐ ಅವರಿಂದ ಮಾಹಿತಿ ಪಡೆದರು.
ತನಿಖೆಗೆ ಆಗ್ರಹ
‘ಮುರುಘಾ ಮಠದ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾವುದೇ ಪ್ರಭಾವಕ್ಕೂ ಒಳಗಾಗಬಾರದು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
‘ಮಹಿಳೆಯರು, ಮಕ್ಕಳೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗಳು ಸಮಾಜದ ದೃಷ್ಟಿಯಲ್ಲಿ ಎಷ್ಟೇ ದೊಡ್ಡವರು ಎನಿಸಿಕೊಂಡಿರಲಿ. ಅವರ ಕೊಳಕು ಕ್ರಿಯೆಯನ್ನು ಸಹಿಸಲಾಗದು’ ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಮತ್ತು ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.