ಬೆಂಗಳೂರು: ‘ಪ್ರತಿಮಾ ಕೊಲೆ ಪ್ರಕರಣದಲ್ಲಿ ನನ್ನನ್ನು ತಿಹಾರ್ ಜೈಲಿಗೆ ಕಳಿಸಬೇಕೆಂದು ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ.
‘ಲೋಕಸಭೆ ಚುನಾವಣೆ ಮುಗಿಯುವರೆಗೆ ನಾನು ಹೊರಗೆ ಇರಬಾರದು ಎಂದು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದಕ್ಕಾಗಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ನನ್ನನ್ನು ತಳುಕು ಹಾಕಿ ಜೈಲಿಗೆ ಕಳುಹಿಸಲು ಸಂಚು ನಡೆಸಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಮನೆ ಮುಂದೆ ನಡೆಯುವ ಅಪಘಾತವನ್ನೂ ನನ್ನ ತಲೆಗೆ ಕಟ್ಟುವ ಕೆಲಸ ನಡೆದಿದೆ. ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಈಗ ಮಾತನಾಡುವುದು ಸರಿಯಲ್ಲ. ತನಿಖೆ ಮುಗಿದ ಬಳಿಕ ಮಾತನಾಡುತ್ತೇನೆ. ರಾಜಕೀಯವಾಗಿ ಮುಗಿಸಬೇಕು ಎನ್ನುವವರಿಗೆ ಆಗ ಸೂಕ್ತ ಉತ್ತರ ನೀಡುತ್ತೇನೆ’ ಎಂದು ಮುನಿರತ್ನ ಹೇಳಿದರು.