ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 24 ವಾರದಲ್ಲೇ ಅವಧಿಪೂರ್ವ ಮಗು ಜನಿಸಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.
ಈ ರೀತಿ ಅವಧಿ ಪೂರ್ವ ಮಗು ಸಾಮಾನ್ಯ ಮಗುವಿನಂತೆ ಆರೋಗ್ಯಪೂರ್ಣವಾಗಿರುವುದು ಅಭೂತಪೂರ್ವ ಸಾಧನೆ. ಹುಟ್ಟಿದಾಗ ಈ ಮಗು 630 ಗ್ರಾಂ ತೂಕವಿತ್ತು ಎಂದು ಆಸ್ಪತ್ರೆಯ ವೈದ್ಯ ಡಾ.ಅಪ್ರಮೇಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾಮಾನ್ಯವಾಗಿ 7 ತಿಂಗಳಿಗೆ ಹುಟ್ಟಿದ ಮಗು ಬದುಕುವುದೇ ಕಷ್ಟ. ಇದಕ್ಕೆ ಆಸ್ಪತ್ರೆಯ ಶಿಶುತಜ್ಞ ವಿಭಾಗದ ವೈದ್ಯರ ಸಾಮರ್ಥ್ಯ ಕಾರಣ. ಹೆರಿಗೆ ನೋವು ಕಾಣಿಸಿಕೊಂಡ 37 ವರ್ಷದ ಮಹಿಳೆಯೊಬ್ಬರು ಆ. 24ರಂದು ಆಸ್ಪತ್ರೆಗೆ ಬಂದಿದ್ದರು. ಮಹಿಳೆಯ ಗರ್ಭಕೋಶದಿಂದ ನೀರು ಸೋರುತ್ತಿರುವುದು ಪತ್ತೆಯಾಗಿತ್ತು. ತಕ್ಷಣ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಮಗು ಹೊರತೆಗೆಯಲಾಯಿತು. ತೀವ್ರನಿಗಾ ಘಟಕದಲ್ಲಿಟ್ಟು ಪೋಷಿಸಲಾಯಿತು. ಸುಮಾರು 80 ದಿನಗಳ ನಂತರ ಮಗು 1.5 ಕೆ.ಜಿ. ತೂಕಕ್ಕೆ ಬಂದಿತು ಎಂದು ವಿವರ ನೀಡಿದರು.
ಡಾ.ರಶ್ಮಿ ಸಿ. ಅಂಚಿನಾಳ, ಡಾ.ರಾಘವೇಂದ್ರ ಭಟ್, ಡಾ.ಸುನಿಲ್ ಕುಮಾರ್, ಡಾ.ಭರತ್ ನಾಡಿಗ್ ಮತ್ತು ಸಿಬ್ಬಂದಿ ಅಭಿನಂದನಾರ್ಹರು. ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ದೇಸಾಯಿ ಎಲ್ಲರನ್ನೂ ಅಭಿನಂದಿಸಿದ್ದಾರೆ ಎಂದರು.