ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ವಿವಿಧ ನಗರಗಳ ಕೊಳೆಗೇರಿ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ಒದಗಿಸಲು ವಿಸ್ತೃತ ಯೋಜನೆ ರೂಪಿಸಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್ ಹೇಳಿದರು.
ಪರಿಷತ್ನ ಕೇಂದ್ರ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ 200ಕ್ಕೂ ಹೆಚ್ಚು ಕೊಳೆಗೇರಿಗಳ ಮಕ್ಕಳಿಗೆ ಉಚಿತ ಮನೆಪಾಠ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ನಿವಾಸಿಗಳಿಗೆ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಅವರ ಮಕ್ಕಳ ಶಿಕ್ಷಣಕ್ಕೆ ಇನ್ನಷ್ಟು ಆದ್ಯತೆ ನೀಡಲಾಗುವುದು. ಜೀವನಮಟ್ಟದಲ್ಲಿ ಗುಣಾತ್ಮಕ ಬದಲಾವಣೆ ತರಲಾಗುವುದು. ಅದಕ್ಕಾಗಿ ಕೊಳೆಗೇರಿಗಳ ಸೇವೆ ವಿಸ್ತರಿಸಲಾಗುವುದು ಎಂದರು.
ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪರಿಷತ್ನಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಾಣಿಜ್ಯವಲ್ಲದ ಆರೋಗ್ಯ ಕೇಂದ್ರಿತವಾದ ಯೋಗ ಕೇಂದ್ರ ಆರಂಭಿಸಲಾಗುತ್ತಿದೆ. ಪ್ರತಿ ವರ್ಷ ಪಿಯು ಪೂರೈಸಿದ 40 ಯುವತಿಯರಿಗೆ ‘ಸಾಧನಾ’ ಹೆಸರಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ. ‘ತಪಸ್’ ಯೋಜನೆ ಅಡಿ ಯುವಕರಿಗೆ ಉದ್ಯೋಗಾಧಾರಿತ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಲಾಗಿದೆ. ರಕ್ತನಿಧಿಯ ಮೂಲಕ ಹಲವರ ಜೀವ ಉಳಿಸಲಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮಾಡಲಾಗಿದೆ ಎಂದರು.
ಪರಿಷತ್ತಿನ ಪ್ರಮುಖರಾದ ಮಲ್ಲೇಪುರಂ ವೆಂಕಟೇಶ್, ನಾ.ದಿನೇಶ್ ಹೆಗ್ಡೆ, ಮಂಜುನಾಥ ಅಜ್ಜಂಪುರ, ಡಾ.ಎಸ್.ಆರ್.ರಾಮಸ್ವಾಮಿ, ಅಜಕ್ಕಳ ಗಿರೀಶ್ ಭಟ್ ಹಾಜರಿದ್ದರು.