ಚಿತ್ರದುರ್ಗ: ‘ಸಾಮಾಜಿಕ ಸೇವೆಗಳಲ್ಲಿ ತೊಡಗಿರುವ ಧಾರ್ಮಿಕ ಕೇಂದ್ರಗಳಿಗೆ ನೀಡುವ ಅನುದಾನವನ್ನು ಮರುಪರಿಶೀಲಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ವಿದ್ವಾನ್ ಪಾರನಂದಿ ಎಚ್.ಎಲ್. ಚಂದ್ರಶೇಖರ ಶಾಸ್ತ್ರೀ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿನ ಶ್ರೀನಿವಾಸ ಅವಧಾನಿ ಪ್ರಾಂಗಣದಲ್ಲಿ ಭಾನುವಾರ ನಡೆದ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ಪೀಠಾಧಿಪತಿಯಾಗಿದ್ದ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ ಅವರ ‘ಶತಮಾನೋತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಧಾರ್ಮಿಕ ಕೇಂದ್ರಗಳಿಗೆ ನೀಡುವ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಬಾರದು. ಏಕರೀತಿಯ ನಿಯಮ ಜಾರಿಯಾಗಬೇಕು. ಈ ಕುರಿತು ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
‘ಸಂಸ್ಕೃತ ವಿದ್ವತ್ ಶಿಕ್ಷಣದಲ್ಲಿ ಪಾಂಡಿತ್ಯ ಪಡೆದಿದ್ದ ವಾಲುಕೇಶ್ವರ ಭಾರತಿ ಸ್ವಾಮೀಜಿ ಅವರು ದೇಶದ ವಿವಿಧ ರಾಜ್ಯಗಳಲ್ಲಿ ಖ್ಯಾತಿ ಗಳಿಸಿದರು. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ’ ಎಂದು ಆದಿಗುರು ಶಂಕರಾಚಾರ್ಯ ವಿಚಾರ ವೇದಿಕೆಯ ವೆಂಕಟಸುಬ್ಬು ಮೋಕ್ಷಗುಂಡಂ ಹೇಳಿದರು.
ಮುಖಂಡರಾದ ಅರುಣ್ಕುಮಾರ್, ದೇಶಪಾಂಡೆ, ಅವಧಾನಿ ಶ್ರೀನಾಥ್, ವೆಂಕಟಾಚಲಯ್ಯ, ವಿದ್ವಾನ್ ನಾಗರಾಜ್ ಅವರೂ ಇದ್ದರು.