ಮೈಸೂರು: ‘ಮಾನ, ಮರ್ಯಾದೆ ಇದ್ದವರು ಯಾರಾದರೂ ಮತ್ತೆ ನಮ್ಮನ್ನು ಗೆಲ್ಲಿಸಿ ಎಂದು ಕೇಳುತ್ತಾರೆಯೇ?’ ಎಂದು ಅನರ್ಹ ಶಾಸಕರ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಶಾಸಕರಾಗಿ ಜನರಿಂದ ಆಯ್ಕೆಯಾದ ಮೇಲೆ ಕ್ಷೇತ್ರವನ್ನು ಕಡೆಗಣಿಸಿದ್ದರು. ಈಗ ಅಧಿಕಾರ ಕಳೆದುಕೊಂಡು ಮತ್ತೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಸಚಿವರಾಗಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂಥವರನ್ನು ಜನತೆ ಏಕೆ ಆಯ್ಕೆ ಮಾಡಬೇಕು’ ಎಂದು ಪ್ರಶ್ನಿಸಿದರು.
‘ಎಂಟಿಬಿ ನಾಗರಾಜ್ 30 ವರ್ಷದ ನನ್ನ ಬಂಡವಾಳ ಬಯಲು ಮಾಡುವುದಾಗಿ ಹೇಳಿದ್ದಾರೆ. ಹಾಗಾದರೆ, ಇಷ್ಟು ವರ್ಷ ಏನು ಮಾಡುತ್ತಿದ್ದರು. ಸುಧಾಕರ್ ಕಮಲ ಅರಳಿಸುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇವರಿಗೆ ಬುದ್ಧಿ ಚಂಚಲವಾಗಿದೆ. ಹಾಗಾಗಿ, ಇಷ್ಟಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದರು.
1978ರಿಂದಲೂ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿರುವ ವಿಶ್ವನಾಥ್ ಈವರೆಗೂ ಹುಣಸೂರನ್ನು ಜಿಲ್ಲೆಯಾಗಿಸುವ ಪ್ರಯತ್ನ ಏಕೆ ಮಾಡಿರಲಿಲ್ಲ ಎಂದು ಕೇಳಿದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅನರ್ಹ ಶಾಸಕರೇ ಕಾರಣ. ಹಾಗಾಗಿ, ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇವೆ. ಇವರನ್ನು ಅನರ್ಹರು ಎಂದು ವಿಧಾನಸಭೆಯ ಅಧ್ಯಕ್ಷರು ಘೋಷಿಸಿದ್ದಾರೆ. ಇವರ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇವರ ಗಿಮಿಕ್ಗಳು ಮತದಾರರ ಮುಂದೆ ನಡೆಯುವುದಿಲ್ಲ’ ಎಂದರು.