ಶಿವಮೊಗ್ಗ: ವಿಧಾನಪರಿಷತ್ಗೆ ಜೂನ್ ತಿಂಗಳಲ್ಲಿ ನಡೆಯುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಹೆಸರು ಗುರುವಾರ ಘೋಷಣೆ ಆಗಿದೆ.
ಹಿಂದಿನ ಅವಧಿಯಲ್ಲಿ ಆಯನೂರು ಮಂಜುನಾಥ್ ಅದೇ ಕ್ಷೇತ್ರವನ್ನು ಬಿಜೆಪಿಯಿಂದ ಪ್ರತಿನಿಧಿಸುತ್ತಿದ್ದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಆಯನೂರು ಮಂಜುನಾಥ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರು.
ಆಯನೂರು ಮಂಜುನಾಥ್ ರಾಜೀನಾಮೆ ಕೊಟ್ಟ ಕಾರಣ ತೆರ ವಾಗಿದ್ದ ಸ್ಥಾನಕ್ಕೆ ಈಗ ಚುನಾವಣೆ ಘೋಷಿಸಲಾಗಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
1994ರಲ್ಲಿ ಹೊಸನಗರ ಕ್ಷೇತ್ರದಿಂದ ವಿಧಾನಸಭೆಗೆ, 1998ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್, 2010ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2018ರಿಂದ ನೈರುತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಶಿವಮೊಗ್ಗದ ಮಿಷನ್ ಕಾಂಪೌಂಡ್ ನಿವಾಸಿ ಆದ ಆಯನೂರು ಮಂಜುನಾಥ್ ಕಾನೂನು ಪದವೀಧರ. ವಿವಿಧ ಕಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಕೆಪಿಸಿಸಿ ವಕ್ತಾರ.