ಬೆಂಗಳೂರು: ‘ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನೆರೆ ರಾಷ್ಟ್ರಗಳು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಇದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ದೇಶ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳಲಾಗುತ್ತಿದೆ. ಅಲ್ಲಿನ ಇಂಚಿಂಚು ಭೂಮಿ ಸಹ ಭಾರತದ್ದಾಗಿದೆ’ ಎಂದು ಉಪರಾಷ್ಟ್ರಪತಿಎಂ. ವೆಂಕಯ್ಯ ನಾಯ್ಡು ಹೇಳಿದರು.
ನಗರದಲ್ಲಿ ಮಂಗಳವಾರ ನಡೆದಜಯನಗರದ ಬಿ.ಎಚ್.ಎಸ್. ಎಜುಕೇಷನ್ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರದ್ದುಗೊಳಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದೆ.ನಾವು ಯುದ್ಧ ಮಾಡುವ ಉದ್ದೇಶದಿಂದ 370 ವಿಧಿ ರದ್ದು ಮಾಡಿಲ್ಲ. ಬದಲಾಗಿನಮ್ಮ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನವಾಗಿದೆ. ಹಾಗಂತ ನಮ್ಮನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಹೇಳಿದರು.
ಮೌಲ್ಯಯುತ ಶಿಕ್ಷಣ ಅಗತ್ಯ: ‘ಸದ್ಯದಪರಿಸ್ಥಿಯಲ್ಲಿ ಕೌಶಲ ಹಾಗೂ ಮೌಲ್ಯವನ್ನು ಅಳವಡಿಸಿರುವ ಶಿಕ್ಷಣ ಪದ್ಧತಿ ಅಗತ್ಯ. ಈ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ಆಶಾಕಿರಣವಾಗಿದೆ. ಶಿಕ್ಷಣದಿಂದ ಉದ್ಯೋಗ ಮಾತ್ರ ಪ್ರಾಪ್ತಿಯಾಗಲಿದೆ ಎಂದು ಯುವಜನತೆ ತಪ್ಪಾಗಿ ತಿಳಿದಿದ್ದಾರೆ.ಜ್ಞಾನ, ಮಾನವೀಯ ಗುಣಗಳನ್ನು ಕೂಡಾ ತಿಳಿಸಿ ಕೊಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿಂದಿನ ಗುರುಕುಲ ಪದ್ಧತಿಯಲ್ಲಿ ಈ ಎಲ್ಲ ಅಂಶಗಳನ್ನು ತಿಳಿಸಿಕೊಡಲಾಗುತ್ತಿತ್ತು’ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ, ‘ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣವು ಎಲ್ಲ ವರ್ಗದವರಿಗೂ ಸಿಗುವಂತೆ ಮಾಡಿದೆ. ಅಷ್ಟೇ ಅಲ್ಲ, ಉಜ್ವಲ ಬದುಕು ರೂಪಿಸಿಕೊಳ್ಳಲು ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ದೇಶದಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ’ ಎಂದು ಹೇಳಿದರು.
‘ಜಂಕ್ ಫುಡ್ ವ್ಯಾಮೋಹ ಬಿಡಿ’ ‘ಆಧುನಿಕ ಆಹಾರ ಪದ್ಧತಿಯಿಂದ ಯುವಜನತೆ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಜಂಕ್ ಫುಡ್ ವ್ಯಾಮೋಹ ಬಿಟ್ಟು, ಆರೋಗ್ಯಕರ ತಿನಿಸುಗಳನ್ನು ಸೇವಿಸಬೇಕು’ ಎಂದುವೆಂಕಯ್ಯ ನಾಯ್ದು ತಿಳಿಸಿದರು.
‘ನಾನು ಬೆಂಗಳೂರಿನಲ್ಲಿದ್ದಾಗ ಜನಾರ್ದನ ಹೊಟೇಲ್ಗೆ ಹೋಗಿ ದೋಸೆ ತಿನ್ನುತ್ತಿದ್ದೆ’ ಎಂದು ನೆನಪಿಸಿಕೊಂಡರು.