ಬೆಂಗಳೂರು: ‘ನಾವು (ಕಾಂಗ್ರೆಸ್ನವರು) ಕೂಡ ಹಿಂದುಗಳೇ. ಬಿಜೆಪಿಯವರಷ್ಟೇ ಹಿಂದುಗಳಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೋಗಬೇಕೊ ಬೇಡವೊ ಎಂಬುದನ್ನು ನಮ್ಮ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಮ ರಾಜ್ಯ ಎನ್ನುವುದು ಎಲ್ಲರಿಗೂ ಇದೆ. ಬಿಜೆಪಿಗಷ್ಟೇ ಅಲ್ಲ. ‘ಇಂಡಿಯಾ’ದ (ವಿರೋಧ ಪಕ್ಷಗಳ ಮೈತ್ರಿಕೂಟ) ನಾಯಕರು ರಾಮ ಮಂದಿರ ಉದ್ಘಾಟನೆಗೆ ಹೋಗುವ ಬಗ್ಗೆ ದೆಹಲಿ ನಾಯಕರು ತೀರ್ಮಾನಿಸುತ್ತಾರೆ’ ಎಂದರು.
ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಸಿಬಿಐ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಿಬಿಐನವರು ಅವರ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಅವರಿಗೆ ಯಾಕೆ ನೋಟಿಸ್ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.
‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರನ್ನು ದೆಹಲಿಗೆ ಬರುವಂತೆ ವರಿಷ್ಠರು ಕರೆದಿದ್ದಾರೆ. ಲೋಕಸಭಾ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಅವರಿಬ್ಬರೂ ಹೋಗುತ್ತಿದ್ದಾರೆ. ನಾವು ನಮ್ಮ ಅಭಿಪ್ರಾಯವನ್ನು ಇವರಿಗೆ ಹೇಳಿದ್ದೇವೆ. ಹೀಗಾಗಿ ನಮ್ಮನ್ನು ದೆಹಲಿಗೆ ಆಹ್ವಾನಿಸುವ ಅವಶ್ಯಕತೆ ಇಲ್ಲ’ ಎಂದರು.