<p><strong>ಬೆಂಗಳೂರು: </strong>‘ರಾಜ್ಯದ ವಿಶ್ವವಿದ್ಯಾಲಯಗಳ ಅಂಕಪಟ್ಟಿ ಮುದ್ರಣ ಕಾಗದ ಖರೀದಿಯಲ್ಲಿ ನನ್ನ ಪಾತ್ರ ಇಲ್ಲ. ನಾನು ಭ್ರಷ್ಟಾಚಾರ ಮಾಡಿದ್ದರೆ ಈ ಜಾಗದಲ್ಲಿ ಕೂಡುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.</p>.<p>ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರು ನೀಡಿದವರು ಈ ವಿಷಯದ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಬೇಕಿತ್ತು. ಯಾರೊ ಹೇಳಿದ್ದಾರೆ ಎಂದೋ, ಸ್ವಪ್ರತಿಷ್ಠೆಗಾಗಿಯೋ ತಪ್ಪು ಮಾಹಿತಿಗಳೊಂದಿಗೆ ದೂರು ನೀಡುವುದು ಖಂಡನೀಯ ಎಂದು ಅವರು ಗುರುವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.</p>.<p>ಅನೇಕ ವಿಶ್ವವಿದ್ಯಾಲಯಗಳು ಕಳಪೆ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿದ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದವು. ಈ ಬಗ್ಗೆ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಒಮ್ಮೆ ಚರ್ಚಿಸಲಾಯಿತು. ಅಲ್ಲದೆ, ಇಂತಹ ಕಾಗದಕ್ಕಾಗಿ ವಿಶ್ವವಿದ್ಯಾಲಯಗಳು ₹28.50 ರಿಂದ ₹212 ವರೆಗೆ ನೀಡುತ್ತಿರುವುದನ್ನೂ ಗಮನಿಸಲಾಯಿತು. ಇದರ ಬದಲು ಎಂಎಸ್ಐಎಲ್ನ (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಲೇಖಕ್ ಬ್ರ್ಯಾಂಡ್ನ ಕಾಗದ ಖರೀದಿಸುವಂತೆ ಸಲಹೆ ನೀಡಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿತ್ತು ಎಂದರು.</p>.<p>‘ತುಮಕೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂಎಸ್ಐಎಲ್ ಮೂಲಕ ಕಾಗದ ಖರೀದಿಸಲು ನಿರ್ಧರಿಸಿದವು. ಈ ಸಂಬಂಧ ಎಂಎಸ್ಐಎಲ್ ಟೆಂಡರ್ ಕರೆದು ಕಡಿಮೆ ಮೊತ್ತ ಬಿಡ್ ಮಾಡಿದ ಕಂಪೆನಿಗೆ ಟೆಂಡರ್ ನೀಡಿದೆ. ಅಲ್ಲಿಂದ ನೇರವಾಗಿ ವಿಶ್ವವಿದ್ಯಾಲಯಗಳಿಗೆ ಕಾಗದ ಸರಬರಾಜು ಆಗುತ್ತದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ’ ಎಂದು ರಾಯರಡ್ಡಿ ಪ್ರಶ್ನಿಸಿದರು.</p>.<p>ಮಾಧ್ಯಮಗಳಲ್ಲಿ ಆರೋಪಿಸಿದಂತೆ ಎಂಎಸ್ಐಎಲ್ ₹ 90 ದರದಲ್ಲಿ ಅಂಕಪಟ್ಟಿ ಮುದ್ರಣ ಕಾಗದ ಸರಬರಾಜು ಮಾಡಿಲ್ಲ. ವಿವಿಧ ಜಿಎಸ್ಎಂ ಮತ್ತು ಕನಿಷ್ಠ ಎಂಟು ರಹಸ್ಯ ಗುಣಗಳೊಂದಿಗೆ (ಸೆಕ್ಯೂರಿಟಿ ಫೀಚರ್ಸ್) ₹ 18.50ರಿಂದ ₹36.50 ದರದಲ್ಲಿ ಸರಬರಾಜು ಮಾಡಲಾಗಿದೆ. ಅಲ್ಲದೆ, ಆರು ವಿಶ್ವವಿದ್ಯಾಲಯಗಳಲ್ಲಿ ಮೊದಲು ಖರೀದಿಸುತ್ತಿದ್ದ ದರಕ್ಕೂ ಮತ್ತು ಎಂಎಸ್ಐಎಲ್ ನಿಂದ ಖರೀದಿಸಿದ ದರಕ್ಕೂ ಹೋಲಿಸಿದರೆ ₹ 2.25 ಕೋಟಿ ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದರು.</p>.<p>‘35 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಹಣ ಮತ್ತು ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ ಭ್ರಷ್ಟಾಚಾರ ಎಸಗಿದ್ದರೆ ಈ ಜಾಗದಲ್ಲಿ ಕೂಡುವುದಿಲ್ಲ’ ಎಂದು ರಾಯರಡ್ಡಿ ಹೇಳಿದರು.</p>.<p>ಒಂದೇ ದರ ನಿಗದಿಗೆ ಪ್ರಯತ್ನ: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಒಂದೊಂದು ದರ ನಿಗದಿಪಡಿಸಿವೆ. ಮೈಸೂರು ವಿಶ್ವವಿದ್ಯಾಲಯ ₹ 260, ಮಂಗಳೂರು ವಿಶ್ವವಿದ್ಯಾಲಯ ₹200, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ₹ 75 ನಿಗದಿ ಮಾಡಿವೆ. ಕಾಗದದ ವೆಚ್ಚ ತೆಗೆದು ಉಳಿದ ಹಣವನ್ನು ವಿಶ್ವವಿದ್ಯಾಲಯದ ಖಾತೆಗೆ ಜಮೆ ಮಾಡಲಾಗುತ್ತದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಂಕಪಟ್ಟಿಗಾಗಿ ಒಂದೇ ದರ ನಿಗದಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.</p>.<p><strong>‘ಫೇಲಾದವರನ್ನು ಪಾಸ್ ಮಾಡುವಂತೆ ಬಂದಿದ್ದರು’</strong></p>.<p>‘ವೇಣುಗೋಪಾಲ್ ಅವರಿಗೆ ದೂರು ನೀಡಿದ ಎನ್ಎಸ್ಯುಐ ಅಧ್ಯಕ್ಷ ಮಂಜುನಾಥ್ ನನಗೆ ಪರಿಚಯ ಇಲ್ಲ. ವಿಟಿಯುನಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಶಿಫಾರಸು ಮಾಡುವಂತೆ ನನ್ನನ್ನು ಹಿಂದೊಮ್ಮೆ ಭೇಟಿ ಮಾಡಿದ್ದರು’ ಎಂದು ರಾಯರಡ್ಡಿ ಹೇಳಿದರು.</p>.<p>‘ಒಂದು ಸೆಮಿಸ್ಟರ್ನಲ್ಲಿ ವಿದ್ಯಾರ್ಥಿ ಫೇಲಾದರೆ ಅವರಿಗೆ ಮುಂದಿನ ಸೆಮಿಸ್ಟರ್ಗೆ ಅವಕಾಶ ನೀಡುವುದು ಆಯಾ ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಬಿಟ್ಟಿದ್ದು. ಇಂತಹ ಶಿಫಾರಸು ನಾನು ಮಾಡಲು ಬರುವುದಿಲ್ಲ ಎಂದು ಹೇಳಿ ಕಳುಹಿಸಿದ್ದೆ’ ಎಂದರು.</p>.<p>ಈ ದೂರಿನ ಹಿಂದೆ ಕೆಲ ಗುತ್ತಿಗೆದಾರರೂ ಇರಬಹುದು. ಕಳಪೆ ಕಾಗದ ಪೂರೈಸಿ ಹೆಚ್ಚಿನ ಹಣ ಪಡೆಯುತ್ತಿದ್ದವರಿಗೆ ಈಗ ತೊಂದೆಯಾಗಿದೆ. ಅವರೂ ಇದರಲ್ಲಿ ಸೇರಿಕೊಂಡಿರುವ ಅನುಮಾನ ಇದೆ ಎಂದು ರಾಯರಡ್ಡಿ ಶಂಕೆ ವ್ಯಕ್ತಪಡಿಸಿದರು.</p>.<p><strong>ಟೆಂಡರ್ ಪಡೆದ ಸಂಸ್ಥೆ ಬಗ್ಗೆ ಪರಿಶೀಲನೆ</strong></p>.<p>‘ಅಂಕಪಟ್ಟಿ ಕಾಗದ ಪೂರೈಕೆ ಟೆಂಡರ್ ಪಡೆದ ದೇವಾರ್ಸ್ ಇನ್ಫೋಟೆಕ್ ಪ್ರೈ.ಲಿ ಕಪ್ಪು ಪಟ್ಟಿಗೆ ಸೇರಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಸಚಿವರು ಹೇಳಿದರು.</p>.<p>‘ಸರ್ಕಾರದ ಅಂಗಸಂಸ್ಥೆ ಎಂಎಸ್ಐಎಲ್ ಎಲ್ಲವನ್ನೂ ಪರಿಶೀಲಿಸಿ ಟೆಂಡರ್ ನೀಡಿರುತ್ತದೆ ಎಂಬ ವಿಶ್ವಾಸ ಇದೆ. ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗೆ ಟೆಂಡರ್ ನೀಡಿದ್ದರೆ ಎಂಎಸ್ಐಎಲ್ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ’ ಎಂದರು.</p>.<p>* ನನ್ನ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿ ರಾಜ್ಯಪಾಲರು ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿ ಅಂತಹ ಪತ್ರವನ್ನು ನನಗೆ ಕೊಟ್ಟಿಲ್ಲ</p>.<p><em><strong>– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ರಾಜ್ಯದ ವಿಶ್ವವಿದ್ಯಾಲಯಗಳ ಅಂಕಪಟ್ಟಿ ಮುದ್ರಣ ಕಾಗದ ಖರೀದಿಯಲ್ಲಿ ನನ್ನ ಪಾತ್ರ ಇಲ್ಲ. ನಾನು ಭ್ರಷ್ಟಾಚಾರ ಮಾಡಿದ್ದರೆ ಈ ಜಾಗದಲ್ಲಿ ಕೂಡುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.</p>.<p>ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರು ನೀಡಿದವರು ಈ ವಿಷಯದ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಬೇಕಿತ್ತು. ಯಾರೊ ಹೇಳಿದ್ದಾರೆ ಎಂದೋ, ಸ್ವಪ್ರತಿಷ್ಠೆಗಾಗಿಯೋ ತಪ್ಪು ಮಾಹಿತಿಗಳೊಂದಿಗೆ ದೂರು ನೀಡುವುದು ಖಂಡನೀಯ ಎಂದು ಅವರು ಗುರುವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.</p>.<p>ಅನೇಕ ವಿಶ್ವವಿದ್ಯಾಲಯಗಳು ಕಳಪೆ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿದ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದವು. ಈ ಬಗ್ಗೆ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಒಮ್ಮೆ ಚರ್ಚಿಸಲಾಯಿತು. ಅಲ್ಲದೆ, ಇಂತಹ ಕಾಗದಕ್ಕಾಗಿ ವಿಶ್ವವಿದ್ಯಾಲಯಗಳು ₹28.50 ರಿಂದ ₹212 ವರೆಗೆ ನೀಡುತ್ತಿರುವುದನ್ನೂ ಗಮನಿಸಲಾಯಿತು. ಇದರ ಬದಲು ಎಂಎಸ್ಐಎಲ್ನ (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಲೇಖಕ್ ಬ್ರ್ಯಾಂಡ್ನ ಕಾಗದ ಖರೀದಿಸುವಂತೆ ಸಲಹೆ ನೀಡಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿತ್ತು ಎಂದರು.</p>.<p>‘ತುಮಕೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂಎಸ್ಐಎಲ್ ಮೂಲಕ ಕಾಗದ ಖರೀದಿಸಲು ನಿರ್ಧರಿಸಿದವು. ಈ ಸಂಬಂಧ ಎಂಎಸ್ಐಎಲ್ ಟೆಂಡರ್ ಕರೆದು ಕಡಿಮೆ ಮೊತ್ತ ಬಿಡ್ ಮಾಡಿದ ಕಂಪೆನಿಗೆ ಟೆಂಡರ್ ನೀಡಿದೆ. ಅಲ್ಲಿಂದ ನೇರವಾಗಿ ವಿಶ್ವವಿದ್ಯಾಲಯಗಳಿಗೆ ಕಾಗದ ಸರಬರಾಜು ಆಗುತ್ತದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ’ ಎಂದು ರಾಯರಡ್ಡಿ ಪ್ರಶ್ನಿಸಿದರು.</p>.<p>ಮಾಧ್ಯಮಗಳಲ್ಲಿ ಆರೋಪಿಸಿದಂತೆ ಎಂಎಸ್ಐಎಲ್ ₹ 90 ದರದಲ್ಲಿ ಅಂಕಪಟ್ಟಿ ಮುದ್ರಣ ಕಾಗದ ಸರಬರಾಜು ಮಾಡಿಲ್ಲ. ವಿವಿಧ ಜಿಎಸ್ಎಂ ಮತ್ತು ಕನಿಷ್ಠ ಎಂಟು ರಹಸ್ಯ ಗುಣಗಳೊಂದಿಗೆ (ಸೆಕ್ಯೂರಿಟಿ ಫೀಚರ್ಸ್) ₹ 18.50ರಿಂದ ₹36.50 ದರದಲ್ಲಿ ಸರಬರಾಜು ಮಾಡಲಾಗಿದೆ. ಅಲ್ಲದೆ, ಆರು ವಿಶ್ವವಿದ್ಯಾಲಯಗಳಲ್ಲಿ ಮೊದಲು ಖರೀದಿಸುತ್ತಿದ್ದ ದರಕ್ಕೂ ಮತ್ತು ಎಂಎಸ್ಐಎಲ್ ನಿಂದ ಖರೀದಿಸಿದ ದರಕ್ಕೂ ಹೋಲಿಸಿದರೆ ₹ 2.25 ಕೋಟಿ ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದರು.</p>.<p>‘35 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಹಣ ಮತ್ತು ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ ಭ್ರಷ್ಟಾಚಾರ ಎಸಗಿದ್ದರೆ ಈ ಜಾಗದಲ್ಲಿ ಕೂಡುವುದಿಲ್ಲ’ ಎಂದು ರಾಯರಡ್ಡಿ ಹೇಳಿದರು.</p>.<p>ಒಂದೇ ದರ ನಿಗದಿಗೆ ಪ್ರಯತ್ನ: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಒಂದೊಂದು ದರ ನಿಗದಿಪಡಿಸಿವೆ. ಮೈಸೂರು ವಿಶ್ವವಿದ್ಯಾಲಯ ₹ 260, ಮಂಗಳೂರು ವಿಶ್ವವಿದ್ಯಾಲಯ ₹200, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ₹ 75 ನಿಗದಿ ಮಾಡಿವೆ. ಕಾಗದದ ವೆಚ್ಚ ತೆಗೆದು ಉಳಿದ ಹಣವನ್ನು ವಿಶ್ವವಿದ್ಯಾಲಯದ ಖಾತೆಗೆ ಜಮೆ ಮಾಡಲಾಗುತ್ತದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಂಕಪಟ್ಟಿಗಾಗಿ ಒಂದೇ ದರ ನಿಗದಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.</p>.<p><strong>‘ಫೇಲಾದವರನ್ನು ಪಾಸ್ ಮಾಡುವಂತೆ ಬಂದಿದ್ದರು’</strong></p>.<p>‘ವೇಣುಗೋಪಾಲ್ ಅವರಿಗೆ ದೂರು ನೀಡಿದ ಎನ್ಎಸ್ಯುಐ ಅಧ್ಯಕ್ಷ ಮಂಜುನಾಥ್ ನನಗೆ ಪರಿಚಯ ಇಲ್ಲ. ವಿಟಿಯುನಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಶಿಫಾರಸು ಮಾಡುವಂತೆ ನನ್ನನ್ನು ಹಿಂದೊಮ್ಮೆ ಭೇಟಿ ಮಾಡಿದ್ದರು’ ಎಂದು ರಾಯರಡ್ಡಿ ಹೇಳಿದರು.</p>.<p>‘ಒಂದು ಸೆಮಿಸ್ಟರ್ನಲ್ಲಿ ವಿದ್ಯಾರ್ಥಿ ಫೇಲಾದರೆ ಅವರಿಗೆ ಮುಂದಿನ ಸೆಮಿಸ್ಟರ್ಗೆ ಅವಕಾಶ ನೀಡುವುದು ಆಯಾ ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಬಿಟ್ಟಿದ್ದು. ಇಂತಹ ಶಿಫಾರಸು ನಾನು ಮಾಡಲು ಬರುವುದಿಲ್ಲ ಎಂದು ಹೇಳಿ ಕಳುಹಿಸಿದ್ದೆ’ ಎಂದರು.</p>.<p>ಈ ದೂರಿನ ಹಿಂದೆ ಕೆಲ ಗುತ್ತಿಗೆದಾರರೂ ಇರಬಹುದು. ಕಳಪೆ ಕಾಗದ ಪೂರೈಸಿ ಹೆಚ್ಚಿನ ಹಣ ಪಡೆಯುತ್ತಿದ್ದವರಿಗೆ ಈಗ ತೊಂದೆಯಾಗಿದೆ. ಅವರೂ ಇದರಲ್ಲಿ ಸೇರಿಕೊಂಡಿರುವ ಅನುಮಾನ ಇದೆ ಎಂದು ರಾಯರಡ್ಡಿ ಶಂಕೆ ವ್ಯಕ್ತಪಡಿಸಿದರು.</p>.<p><strong>ಟೆಂಡರ್ ಪಡೆದ ಸಂಸ್ಥೆ ಬಗ್ಗೆ ಪರಿಶೀಲನೆ</strong></p>.<p>‘ಅಂಕಪಟ್ಟಿ ಕಾಗದ ಪೂರೈಕೆ ಟೆಂಡರ್ ಪಡೆದ ದೇವಾರ್ಸ್ ಇನ್ಫೋಟೆಕ್ ಪ್ರೈ.ಲಿ ಕಪ್ಪು ಪಟ್ಟಿಗೆ ಸೇರಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಸಚಿವರು ಹೇಳಿದರು.</p>.<p>‘ಸರ್ಕಾರದ ಅಂಗಸಂಸ್ಥೆ ಎಂಎಸ್ಐಎಲ್ ಎಲ್ಲವನ್ನೂ ಪರಿಶೀಲಿಸಿ ಟೆಂಡರ್ ನೀಡಿರುತ್ತದೆ ಎಂಬ ವಿಶ್ವಾಸ ಇದೆ. ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗೆ ಟೆಂಡರ್ ನೀಡಿದ್ದರೆ ಎಂಎಸ್ಐಎಲ್ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ’ ಎಂದರು.</p>.<p>* ನನ್ನ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿ ರಾಜ್ಯಪಾಲರು ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿ ಅಂತಹ ಪತ್ರವನ್ನು ನನಗೆ ಕೊಟ್ಟಿಲ್ಲ</p>.<p><em><strong>– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>