ಬೆಂಗಳೂರು: ಎಲ್.ಕೆ. ಅಡ್ವಾಣಿ ಅವರ `ಜನಚೇತನ ಯಾತ್ರೆ~ಯ ಅಂಗವಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಮಾವೇಶ ನಡೆಯುವುದು ಖಚಿತ ಎಂದು ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯ ಘಟಕ, ಸಮಾವೇಶದ ಸಿದ್ಧತೆಗಾಗಿ ಸೋಮವಾರ ಸರಣಿ ಸಭೆಗಳನ್ನು ನಡೆಸಿತು.
ಮಲ್ಲೇಶ್ವರದಲ್ಲಿರುವ ಪಕ್ಷದ ರಾಜ್ಯ ಕಚೇರಿ `ಜಗನ್ನಾಥ ಭವನ~ದಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, `ಜನಚೇತನ ಯಾತ್ರೆ~ಯ ಬೆಂಗಳೂರು ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ ಜೋಷಿ ಮತ್ತಿತರರು ಪಾಲ್ಗೊಂಡಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸದಸ್ಯರು, ಶಾಸಕರು, ಸಂಸದರಿಗಾಗಿ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ಆದರೆ ಗೃಹ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರ್. ಅಶೋಕ ಅವರು ಯಾವುದೇ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
ವೆಬ್ಸೈಟ್ಗೆ ಚಾಲನೆ: ಮಧ್ಯಾಹ್ನ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಈಶ್ವರಪ್ಪ ಅವರು ಜನಚೇತನ ಯಾತ್ರೆಯ ಕುರಿತು ಮಾಹಿತಿ ನೀಡುವ ವೆಬ್ಸೈಟ್(ಡಿಡಿಡಿ.ಚ್ಜಿಟ್ಜಚ್ಞ್ಚಛಿಠ್ಞಿಠ್ಟಿ.ಡಿಟ್ಟಟ್ಟಛಿ.್ಚಟಞ) ಚಾಲನೆ ನೀಡಿದರು.
ಅಲ್ಲದೆ, ಕಾರ್ಯಕರ್ತರಿಗೆ ಪಕ್ಷದ ಚಟುವಟಿಕೆಗಳ ಕುರಿತು ಮಾಹಿತಿ ನೀಡಲು ಆರಂಭಿಸಲಾದ ಎಲೆಕ್ಟ್ರಾನಿಕ್ ವಾರ್ತಾಪತ್ರವನ್ನೂ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
`ವ್ಯಕ್ತಿ ಮುಖ್ಯವಲ್ಲ~: `ಅಡ್ವಾಣಿ ಅವರ ಈ ಯಾತ್ರೆಯ ಉದ್ದೇಶ ಉತ್ತಮ ಆಡಳಿತ ಮತ್ತು ಸ್ವಚ್ಛ ರಾಜಕಾರಣವನ್ನು ಆಚರಣೆಗೆ ತರುವುದಾಗಿದೆ. ಇಲ್ಲಿ ಯಾವುದೇ ವ್ಯಕ್ತಿ ಮುಖ್ಯವಲ್ಲ~ ಎಂದರು.