ತೀರ್ಥಹಳ್ಳಿ: ಆಗುಂಬೆ ಘಾಟಿ ರಸ್ತೆಯ ದುರಸ್ತಿ ಕಾಮಗಾರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಈ ಮಾರ್ಗದ ರಸ್ತೆಯನ್ನು ಡಿ.24ರಿಂದ ಬಂದ್ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಈ ಹಿಂದೆ ಹೇಳಿದ್ದರೂ ಇನ್ನೂ ಒಂದೆರಡು ವಾರ ಮುಂದೆ ಹೋಗುವ ಸೂಚನೆಗಳಿವೆ.
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದರೂ ತೊಡಕುಗಳ ನಿವಾರಣೆಯಾಗಿಲ್ಲ. ಘಾಟಿ ದುರಸ್ತಿ ಕಾಮಗಾರಿಗೆ ಸೋಮೇಶ್ವರ ಅಭಯಾರಣ್ಯ ವನ್ಯಜೀವಿ ಇಲಾಖೆ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪರವಾನಗಿ ದೊರೆತಿಲ್ಲ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಸೇರಿದ ಆಗುಂಬೆ ಘಾಟಿ ಮಾರ್ಗದ 2.5 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ಸರ್ಕಾರ ₨10 ಕೋಟಿ ಹಣ ಮಂಜೂರು ಮಾಡಿದೆ. ಘಾಟಿಯ ಗುಡ್ಡ ಕೊರೆದು ಸ್ವಲ್ಪ ಪ್ರಮಾಣದ ವಿಸ್ತರಣೆ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಕಾಮಗಾರಿಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಲಾಗಿದೆ.
ಮಳೆಗಾಲಕ್ಕೂ ಮುನ್ನ ರಸ್ತೆ ದುರಸ್ತಿ ಕಾರ್ಯ ಅನಿವಾರ್ಯವಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಳ್ಳುವುದರಿಂದ ಬದಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಆಗುಂಬೆ, ಗುಡ್ಡೇಕೇರಿ, ಹೊಸೂರು, ಕೌರಿಹಕ್ಕಲು, ಮೇಗರವಳ್ಳಿ, ನಾಲೂರು ಭಾಗದ ಗ್ರಾಮಸ್ಥರು ಮುಂದಿಟ್ಟಿದ್ದಾರೆ. ತೀರ್ಥಹಳ್ಳಿಯಿಂದ ಆಗುಂಬೆವರೆಗೆ ಸರ್ವಿಸ್ ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ತೀರ್ಥಹಳ್ಳಿ, ಆಗುಂಬೆ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದಾಗಿದೆ.
ರಸ್ತೆ ದುರಸ್ತಿಗಾಗಿ ಬಂದ್ ಮಾಡಿದರೆ ಪ್ರತಿ ನಿತ್ಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಹೋಗುವ ಸಾವಿರಾರು ಪ್ರಯಾಣಿಕರು ಹುಲಿಕಲ್ ಅಥವಾ ಶೃಂಗೇರಿ ಕೆರೆಕಟ್ಟೆ ಘಾಟಿ ರಸ್ತೆ ಅವಲಂಬಿಸಬೇಕಾಗಿದೆ. ಈ ಮಾರ್ಗದಲ್ಲಿ 60ಕಿ.ಮೀ ಹೆಚ್ಚು ದೂರ ಪ್ರಯಾಣಿಸುವ ಅನಿವಾರ್ಯತೆ ಎದುರಾಗಲಿದೆ.
‘ಅಧಿಸೂಚನೆ ಹೊರಬಿದ್ದಿಲ್ಲ’: ‘ಆಗುಂಬೆ ಘಾಟಿ ದುರಸ್ತಿ ಕಾಮಗಾರಿಗೆ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಪರ್ಯಾಯ ಮಾರ್ಗದ ಕುರಿತು ರಸ್ತೆ ವಿಭಜಕಗಳಲ್ಲಿ ಸೂಚನಾ ಫಲಕ ಹಾಕುವ ಕೆಲಸ ಆಗಬೇಕಿದೆ. ಸುಮಾರು ಹತ್ತು ಸ್ಥಳಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕಿದೆ. ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಪರವಾನಗಿ ಸಿಕ್ಕ ನಂತರ ಒಂದೆರಡು ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.