ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಆರ್ಎಸ್ಎಸ್ನಲ್ಲಿ ಮೂರನೇ ಪ್ರಮುಖ ಹುದ್ದೆಯಾದ ಸಹಸರಕಾರ್ಯವಾಹರನ್ನಾಗಿ ಬೆಂಗಳೂರಿನ ಸಿ.ಆರ್. ಮುಕುಂದ ಹಾಗೂ ಡಾ. ಮನಮೋಹನ್ ವೈದ್ಯ ಅವರನ್ನು ನೇಮಿಸಲಾಗಿದೆ.
ಈ ಹುದ್ದೆಯಲ್ಲಿ ಒಟ್ಟು ಆರು ಮಂದಿಯಿದ್ದಾರೆ. ಸುರೇಶ್ ಸೋನಿ, ಡಾ. ಕೃಷ್ಣ ಗೋಪಾಲ್, ವಿ. ಭಗೈಯ ಹಾಗೂ ದತ್ತಾತ್ರೇಯ ಹೊಸಬಾಳೆ ಈ ಹುದ್ದೆಯಲ್ಲಿರುವ ಇತರರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಪ್ರಾಂತ ಪ್ರಚಾರಕ ಅರುಣ್ ಕುಮಾರ್ ಅವರನ್ನು ಅಖಿಲ ಭಾರತೀಯ ಪ್ರಚಾರ ಪ್ರಮುಖ ಹುದ್ದೆಗೆ ನೇಮಿಸಲಾಗಿದೆ.
ಕರ್ನಾಟಕ ದಕ್ಷಿಣ: ಡಾ. ಜಯಪ್ರಕಾಶ (ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ), ಪಿ.ಎಸ್. ಪ್ರಕಾಶ್ (ಕರ್ನಾಟಕ ಪ್ರಾಂತ ಸಹಕಾರ್ಯವಾಹ), ಗುರುಪ್ರಸಾದ್ (ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ)
ಉತ್ತರ ಕರ್ನಾಟಕ: ಸುಧಾಕರ್ (ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ), ನರೇಂದ್ರ (ಕರ್ನಾಟಕ ಉತ್ತರ ಪ್ರಾಂತ ಸಹ ಪ್ರಚಾರಕ)
ಕ್ಷೇತ್ರ ಮಟ್ಟ: ಎನ್. ತಿಪ್ಪೇಸ್ವಾಮಿ (ಕ್ಷೇತ್ರೀಯ ಸಹಕಾರ್ಯವಾಹ–ಕರ್ನಾಟಕ, ಆಂಧ್ರ, ತೆಲಂಗಾಣ), ಸುಧೀರ್ (ಕ್ಷೇತ್ರೀಯ ಸಹ ಪ್ರಚಾರಕ–ಕರ್ನಾಟಕ, ಆಂಧ್ರ, ತೆಲಂಗಾಣ), ಬಿ.ವಿ. ಶ್ರೀಧರ್ವಾಮಿ (ಕ್ಷೇತ್ರೀಯ ಬೌದ್ಧಿಕ್ ಪ್ರಮುಖ), ಶಂಕರಾನಂದ (ಭಾರತೀಯ ಶಿಕ್ಷಣ ಮಂಡಲ–ಹೊಸ ಜವಾಬ್ದಾರಿ).
‘ಅಯೋಧ್ಯೆ ವಿವಾದ: ಒಮ್ಮತ ಕಷ್ಟ, ಮಂದಿರ ನಿರ್ಮಿಸಿಯೇ ಸಿದ್ಧ’
ನಾಗಪುರ(ಪಿಟಿಐ): ‘ರಾಮ ಮಂದಿರ ವಿವಾದ ಪರಿಹಾರಕ್ಕೆ ಒಮ್ಮತ ಮೂಡಿಸುವುದು ಕಷ್ಟ. ಆದರೆ ಅಯೋಧ್ಯೆಯಲ್ಲಿಯೇ ಮಂದಿರ ನಿರ್ಮಾಣವಾಗಲಿದೆ. ಅಲ್ಲಿ ಬೇರೇನೂ ನಿರ್ಮಾಣವಾಗದು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಭಾನುವಾರ ಹೇಳಿದ್ದಾರೆ.
‘ಸುಪ್ರೀಂಕೋರ್ಟ್ನಿಂದ ನಮಗೆ ಅನುಕೂಲವಾದ ತೀರ್ಪು ಪ್ರಕಟವಾಗುವ ವಿಶ್ವಾಸವಿದೆ. ಅನಂತರ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದಿದ್ದಾರೆ.
ರಾಮಮಂದಿರ ನಿರ್ಮಣಕ್ಕಾಗಿ ಆಧ್ಯಾತ್ಮಿಕ ಗುರು ಶ್ರೀಶ್ರೀ ರವಿಶಂಕರ್ ಅವರು ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಭಯ್ಯಾಜಿ, ‘ಎರಡೂ ಕಡೆಯವರು ಸೇರಿ ಸಂಧಾನದ ಮೂಲಕ ವಿವಾದ ಪರಿಹರಿಸಬೇಕೆಂದು ನಾವು ಕೂಡ ಪ್ರಯತ್ನಿಸಿದ್ದೇವೆ. ಆದರೆ ಇದು ಸುಲಭವಲ್ಲ ಎಂಬುದನ್ನು ಅನುಭವದಿಂದ ಅರಿತಿದ್ದೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.