ಬೆಂಗಳೂರು: ‘ರಾಜ್ಯದಲ್ಲಿ ಶನಿವಾರ, ಸೋಮವಾರ ಮತ್ತು ಮಂಗಳವಾರ ಬ್ಯಾಂಕುಗಳು ವಹಿವಾಟಿಗೆ ತೆರೆದಿರುತ್ತವೆ’ ಎಂದು ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟದ (ಐಎನ್ಬಿಇಎಫ್) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಶುಕ್ರವಾರ ಹೇಳಿದರು.
ಮಾ. 28ರಿಂದ ಆರಂಭಿಸಿ ಏ. 5ರ ವರೆಗೂ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಲಿದೆ ಎಂಬ ಭಾರತೀಯ ವಾಣಿಜ್ಯ ಮಹಾಸಂಘದ (ಅಸೋಚಾಂ) ಹೇಳಿಕೆ ಕುರಿತಾಗಿ ಅವರು ಪ್ರಜಾವಾಣಿಗೆ ಸ್ಪಷ್ಟನೆ ನೀಡಿದರು.
‘ಶನಿವಾರ ರಾಮನವಮಿಯ ನಿರ್ಬಂಧಿತ ರಜೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ಕಚೇರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದರಿಂದ ಬ್ಯಾಂಕಿನ ವಹಿವಾಟಿಗೆ ಧಕ್ಕೆ ಇಲ್ಲ. ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ಪಾವತಿಗೆ ಮಾರ್ಚ್ 31 ಕಡೇ ದಿನ. ಹೀಗಾಗಿ ಅಂದು ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ ಆರ್ಬಿಐ ಸೂಚನೆಯಂತೆ ಒಂದು ಗಂಟೆ ಹೆಚ್ಚುವರಿಯಾಗಿ ಬ್ಯಾಂಕಿಂಗ್ ವಹಿವಾಟು ನಡೆಸಲಾಗಿತ್ತು ಎಂದು ಅವರು ತಿಳಿಸಿದರು.
ಏಪ್ರಿಲ್ 1 ನ್ನು (ಬುಧವಾರ) ಹಣಕಾಸು ವರ್ಷ ಎಂದು ಪರಿಗಣಿಸಲಾಗುವುದು. ಅಂದು ಗ್ರಾಹಕರಿಗೆ ವಹಿವಾಟು ನಡೆಸಲು ಅವಕಾಶ ಇಲ್ಲ. ಆದರೆ ಬ್ಯಾಂಕಿನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಮಹಾವೀರ ಜಯಂತಿ ಪ್ರಯುಕ್ತ ಏ. 2ರಂದು ಮತ್ತು ಗುಡ್ಫ್ರೈಡೆಯಿಂದಾಗಿ ಏ. 3ರಂದು ಸರ್ಕಾರಿ ರಜೆ ಇದೆ. ಹೀಗಾಗಿ ಏ. 1 ರಿಂದ ಏ.3ರ ವರೆಗೆ ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಿರುತ್ತದೆ.
ಏ. 4 ಶನಿವಾರ ಗ್ರಾಹಕರು ಅರ್ಧ ದಿನದ ವಹಿವಾಟು ನಡೆಸಬಹುದು ಎಂದು ಐಎನ್ಬಿಇಎಫ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ವಿವರಿಸಿದರು.