ದೇವೇಗೌಡ ಮತ್ತು ರಾಮಚಂದ್ರಗೌಡ ನಡುವೆ ಕೊನೆಯವರೆಗೂ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಜಯದ ಮಾಲೆ ರಾಮಚಂದ್ರಗೌಡ ಅವರ ಕೊರಳಿಗೆ ಬಿತ್ತು. ಈ ಮೂಲಕ ಅವರು 5ನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. 2006ರಲ್ಲಿ ಮೊದಲ ಸುತ್ತಿನಲ್ಲೇ ಜಯಗಳಿಸಿದ್ದ ರಾಮಚಂದ್ರಗೌಡ ಈ ಬಾರಿ ಎರಡನೇ ಆದ್ಯತೆ ಮತ ಎಣಿಕೆಯ ಕೊನೆ ಸುತ್ತಿನವರೆಗೂ ಕಾಯಬೇಕಾಯಿತು.
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಜಯ ಗಳಿಸಿದೆ.
ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರಗೌಡ, ಗಣೇಶ್ ಕಾರ್ಣಿಕ್, ಮರಿತಿಬ್ಬೇಗೌಡ ಅವರ ಅವಧಿ ಇದೇ 21ಕ್ಕೆ ಮುಕ್ತಾಯವಾಗಲಿದೆ. ಇವರೆಲ್ಲ ಪುನರಾಯ್ಕೆಯಾಗಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ವೈ.ಎ.ನಾರಾಯಣಸ್ವಾಮಿ ಚುನಾವಣೆಗೂ ಮೊದಲೇ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಅವರು ಸಹ ಮೇಲ್ಮನೆಗೆ ಹಳಬರು. ಈಶಾನ್ಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಅಮರನಾಥ ಪಾಟೀಲ ಮಾತ್ರ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ.