ಬೆಂಗಳೂರು: ಆದಿಚುಂಚನಗಿರಿ ಶಾಖಾ ಮಠ ಹಾಗೂ ಅದರ ಅಂಗಸಂಸ್ಥೆಗಳ ಮೇಲೆ ನಡೆದ ದಾಳಿ ಘಟನೆಗೆ ವಿಧಾನ ಪರಿಷತ್ನಲ್ಲಿ ಶುಕ್ರವಾರ ಪ್ರಬಲ ಪ್ರತಿರೋಧ ವ್ಯಕ್ತವಾಯಿತು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `450ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಮತ್ತು ನೂರಾರು ಆಸ್ಪತ್ರೆಗಳ ಮೂಲಕ ನಾಡಿನ ಸೇವೆ ಮಾಡುತ್ತಿರುವ ಪ್ರತಿಷ್ಠಿತ ಆದಿಚುಂಚನಗಿರಿ ಮಠದ ವಿರುದ್ಧ ಇಂತಹ ಪ್ರಹಾರ ನಡೆಸಿದ್ದು ಏಕೆ' ಎಂದು ಪ್ರಶ್ನಿಸಿದರು.
`ಲೆಕ್ಕಪತ್ರದಲ್ಲಿ ಏನಾದರೂ ಏರು-ಪೇರುಗಳಿದ್ದರೆ ತನಿಖೆ ನಡೆಸಲು ನಮ್ಮ ಅಭ್ಯಂತರ ಏನಿಲ್ಲ. ಆದರೆ, ಸಂಸ್ಥೆಯನ್ನೇ ಅಧೀರಗೊಳಿಸುವ ಇಂತಹ ಯತ್ನ ತರವಲ್ಲ. ಸರ್ಕಾರವೂ ಮಾಡಲಾಗದಷ್ಟು ಸಮಾಜ ಸೇವೆಯಲ್ಲಿ ನಿತರವಾಗಿರುವ ಮಠದ ಮೇಲೆ ನಡೆದಿರುವ ಈ ಪ್ರಹಾರದ ವಿರುದ್ಧ ಚರ್ಚೆಗೆ ಅವಕಾಶ ಕಲ್ಪಿಸಬೇಕು' ಎಂದು ಪಟ್ಟುಹಿಡಿದರು.
`ತ್ರಿವಿಧ ದಾಸೋಹದಲ್ಲಿ ತೊಡಗಿರುವ ಮಠದ ಮೇಲೆ ದಾಳಿ ನಡೆಸುವ ಮೂಲಕ ಕಳಂಕ ತರಲು ಹುನ್ನಾರ ನಡೆಸಲಾಗಿದೆ. ಇಂತಹ ಯತ್ನಗಳನ್ನು ನಾವು ಖಂಡಿಸುತ್ತೇವೆ' ಎಂದು ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡರಂಗೇಗೌಡ ಅವರಿಂದಲೂ ಪ್ರತಿರೋಧ ವ್ಯಕ್ತವಾಯಿತು.
`ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಈ ದಾಳಿ ನಡೆಸಿರುವುದರಿಂದ ಸದನದ ಚರ್ಚೆ ವ್ಯಾಪ್ತಿಗೆ ಬರುವುದಿಲ್ಲ' ಎಂದು ಸಭಾನಾಯಕ ಎಸ್.ಆರ್. ಪಾಟೀಲ ಹೇಳಿದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಎದ್ದುನಿಂತು ಸಭಾನಾಯಕರ ಹೇಳಿಕೆಗೆ ಆಕ್ಷೇಪ ಎತ್ತಿದರು.