ಬೆಂಗಳೂರು: ಪರಿಸರ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡಿದ ಮೂವರು ವ್ಯಕ್ತಿಗಳು ಮತ್ತು ಮೂರು ಸಂಸ್ಥೆಗಳಿಗೆ 2015ನೇ ಸಾಲಿನ ವಿಶ್ವ ಪರಿಸರ ದಿನ ಅಂಗವಾಗಿ ‘ರಾಜ್ಯ ಪರಿಸರ ಪ್ರಶಸ್ತಿ’ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ತಲಾ ₨ 1 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಹೇಳಿದರು.
ಅರಣ್ಯ ಜಮೀನಿನ ಒತ್ತುವರಿಗೆ ಅವಕಾಶ ಇಲ್ಲ. ಆದರೆ, ಸಣ್ಣ ಪ್ರಮಾಣದಲ್ಲಿ ಈಗಾಗಲೇ ಒತ್ತುವರಿ ಮಾಡಿಕೊಂಡವರಿಗೆ ತೊಂದರೆ ಆಗದ ರೀತಿಯಲ್ಲಿ ಒತ್ತುವರಿ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆಉತ್ತರಿಸಿದರು.
ಯಾರಿಗೆ ಪ್ರಶಸ್ತಿ? ವ್ಯಕ್ತಿ ವಿಭಾಗ: ಸಿ. ಲಕ್ಷ್ಮಣ್ (ಬನಶಂಕರಿ, ಬೆಂಗಳೂರು), ಡಾ.ಆರ್. ಪರಿಮಳ (ವೈ.ಎಸ್. ಕಾಲೊನಿ, ಧಾರವಾಡ), ಡಾ.ಎಸ್. ಹರೀಶ ಜೋಷಿ (ಬಿಜೈ, ಮಂಗಳೂರು)
ಸಂಸ್ಥೆ: ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್ (ಬೆಂಗಳೂರು), ಬಂಟನೂರ ಗ್ರಾಮ ಅರಣ್ಯ ಸಮಿತಿ (ಮುಧೋಳ), ಪರಿಸರ ಅಭಿವೃದ್ಧಿ ಸಮಿತಿ (ದಾಂಡೇಲಿ).