ಬೆಂಗಳೂರು: ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಬಯಸುವವರಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎರಡನೇ ದಿನವೂ ಸುಗಮವಾಗಿ ನಡೆದಿದ್ದು ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸಿತು.
ಗುರುವಾರ ರಾಜ್ಯದಾದ್ಯಂತ 430 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ನೋಂದಣಿ ಮಾಡಿಕೊಂಡಿದ್ದ 1,98,655 ವಿದ್ಯಾರ್ಥಿಗಳಲ್ಲಿ ಭೌತ ವಿಜ್ಞಾನ ಪರೀಕ್ಷೆಗೆ 192987 (ಶೇ 97.15) ಮಂದಿ ಹಾಜರಾಗಿದ್ದರು. 1,92,951 (ಶೇ 97.13) ವಿದ್ಯಾರ್ಥಿಗಳು ರಸಾಯನ ವಿಜ್ಞಾನ ಪರೀಕ್ಷೆ ಬರೆದಿದ್ದಾರೆ.
ಇಂದು ಕನ್ನಡ ಭಾಷಾ ಪರೀಕ್ಷೆ: ಹೊರನಾಡು ಹಾಗೂ ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ ಏ.20ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಬೆಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಕೃಷಿ ಕೋಟಾ ಪರೀಕ್ಷೆ ಮುಂದೂಡಿಕೆ
ಕೃಷಿ ಕೋಟಾ ಅಡಿಯಲ್ಲಿ ಆಯ್ಕೆ ಬಯಸುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಾಗೂ ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ. ದಾಖಲಾತಿ ಪರಿಶೀಲನೆ ಮೇ 18ರಿಂದ ಮೇ 23ರವರೆಗೆ ನಡೆಯಲಿದೆ.
ಪ್ರಾಯೋಗಿಕ ಪರೀಕ್ಷೆ ಮೇ 25ರಂದು ನಡೆಯಲಿದ್ದು, ಪ್ರವೇಶ ಪತ್ರವನ್ನು ಮೇ 10ರಿಂದ kea.kar.nic.in ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.