ಬಳ್ಳಾರಿ: ತೀವ್ರ ಸೆಣಸಾಟಕ್ಕೆ ವೇದಿಕೆಯಾಗಿರುವ ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಮುಖಂಡರು, ಮತದಾರನ ಮನೆಬಾಗಿಲಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ.
ಶನಿವಾರ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರ ಮನೆಗೆ ತೆರಳಿದ ಸಚಿವರಾದ ರಾಜುಗೌಡ, ಸುರೇಶಕುಮಾರ್, ಎ.ರಾಮದಾಸ್, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಿಜೆಪಿ ಪರ ಮತ ಯಾಚಿಸಿದರು.
ನಗರದ ವಿಮ್ಸ ಕ್ರೀಡಾಂಗಣಕ್ಕೆ ಬಿಜೆಪಿ ಅಭ್ಯರ್ಥಿ ಪಿ. ಗಾದಿಲಿಂಗಪ್ಪ ಅವರೊಂದಿಗೆ ಭೇಟಿ ನೀಡಿದ ಸುರೇಶ್ಕುಮಾರ್, ವಾಯುವಿಹಾರಕ್ಕೆ ಆಗಮಿಸಿದವರ ಮತ ಯಾಚಿಸಿದರು. ಅಲ್ಲದೇ, ಯುವಕರೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದರು. ಶೋಭಾ ಕರಂದ್ಲಾಜೆ, ಸಂಜೆ ಮಹಿಳಾ ಸಂಘಟನೆಗಳ ಸದಸ್ಯೆಯರ ಸಭೆ ಕರೆದು ಬಿಜೆಪಿ ಸರ್ಕಾರದ ಸಾಧನೆ ಕುರಿತು ವಿವರಿಸಿದರು.
ಕಾಂಗ್ರೆಸ್ನಿಂದ ಸಂಸದ ಅನಿಲ್ಲಾಡ್, ಮಾಜಿಸಚಿವ ಅಲ್ಲಂ ವೀರಭದ್ರಪ್ಪ, ಜಿ.ಎಸ್. ಆಂಜಿನೇಯುಲು ಅವರು ಅಭ್ಯರ್ಥಿ ಬಿ.ರಾಮಪ್ರಸಾದ್ ಅವರೊಂದಿಗೆ ಸಿಂಧುವಾಳ, ಕಾರೇಕಲ್ಲು, ಸಿಡಿಗಿನಮೋಳ, ಬ್ಯಾಲಚಿಂತ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಮತ ಕೋರಿದರು.
ಹಗರಿ, ಪರಮದೇವನಹಳ್ಳಿ, ಯಾಳ್ಪಿ, ಕಗ್ಗಲ್ಲು ಗ್ರಾಮಗಳಿಗೆ ಕಾರ್ಯಕರ್ತರೊಂದಿಗೆ ತೆರಳಿದ ಮಾಜಿ ಸಚಿವ ಶ್ರೀರಾಮುಲು ಮನೆಮನೆಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.