ಬೆಂಗಳೂರು: ಜೂನ್ ಎರಡನೇ ವಾರದ ವೇಳೆಗೆ ರಾಜ್ಯದಲ್ಲಿ ಮುಂಗಾರು ಮಳೆ ಬಿರುಸಾಗಿ ಸುರಿಯಲಿದ್ದು, ಸರಾಸರಿಗೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಶೇ 5ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ನೈರುತ್ಯ ಮುಂಗಾರು ಮಾರುತಗಳು ಜೂನ್ 3ರಂದು ಕೇರಳದ ಕರಾವಳಿಯಿಂದ ರಾಜ್ಯದ ಕರಾವಳಿ ಮತ್ತು ಘಟ್ಟಪ್ರದೇಶಗಳನ್ನು ತಲುಪಿ ಭಾರಿ ಪ್ರಮಾಣದ ಮಳೆ ಸುರಿಸಲಿದೆ. ನಂತರ ರಾಜ್ಯದ ಉತ್ತರ ಒಳನಾಡಿಗೆ ಜೂನ್ 5 ರಂದು ಸೇರಲಿದೆ. ಈ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಒಳನಾಡಿನಲ್ಲಿ ದಟ್ಟ ಮೋಡ ಮತ್ತು ಗಾಳಿ ಇರುತ್ತದೆ.
ಈ ಬಗ್ಗೆ `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಬಿ.ರಾಜೇಗೌಡ, `ನೈರುತ್ಯ ಮಾರುತವು ಜೂನ್ ಮೊದಲ ವಾರದಿಂದ ಸಕ್ರಿಯವಾಗಿ ಅಕ್ಟೋಬರ್ ತಿಂಗಳ ಎರಡನೇ ವಾರದವರೆಗೆ ಇರುತ್ತದೆ. ಜೂನ್ ಎರಡನೇ ವಾರದ ಅಂತ್ಯದಿಂದ ಸುಮಾರು ಎರಡು ವಾರಗಳ ಕಾಲ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ~ ಎಂದರು.
`ನಂತರ 10 ರಿಂದ 15 ದಿನಗಳ ಕಾಲ ಮಳೆಗೆ ಬಿಡುವು ದೊರೆಯಲಿದೆ. ಬೆಂಗಳೂರು ಚಿತ್ರದುರ್ಗ, ರಾಮನಗರ, ಕೋಲಾರದಲ್ಲಿ ನಡೆಯುವ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ಮಳೆ ನೀರು ಜುಲೈ ಎರಡನೇ ವಾರದ ನಂತರವಷ್ಟೆ ಸಂಗ್ರಹಗೊಳ್ಳಲಿದೆ~ ಎಂದು ತಿಳಿಸಿದರು.
`ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡುವ ರೈತರು ದೀರ್ಘಾವಧಿ ತಳಿಗಳನ್ನು ಆರಿಸಿ ಬಿತ್ತನೆ ಮಾಡಬೇಕು. ಮಳೆಯ ನೀರಿನಲ್ಲಿಯೇ ಕಬ್ಬು ಬೆಳೆಸಬಹುದಾದ್ದರಿಂದ ಕಬ್ಬು ಬೆಳೆಗಾರರಿಗೆ ಜುಲೈ ತಿಂಗಳು ಸೂಕ್ತ. ಆಗಸ್ಟ್ನಲ್ಲಿ ಮಧ್ಯಮಾವಧಿ ಅಥವಾ ಅಲ್ಪಾವಧಿ ತಳಿಗಳನ್ನು ಆರಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.