ಬೆಳಗಾವಿ: `ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಕೆಜೆಪಿ ಸೇರುವುದಿಲ್ಲ. ಬೀಳಗಿ ಮತಕ್ಷೇತ್ರದಿಂದಲೇ ಈ ಬಾರಿಯೂ ಕಣಕ್ಕಿಳಿಯುತ್ತೇನೆ' ಎಂದು ಸಚಿವ ಮುರುಗೇಶ ನಿರಾಣಿ ಘೋಷಿಸುವ ಮೂಲಕ ಕೆಜೆಪಿಗೆ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದರು.
ಗುರುವಾರ ಬಾಗಲಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಿಂದ ದೂರ ಉಳಿದಿದ್ದ ಅವರು, ಅಲ್ಲಿಂದಲೇ ಮುಖ್ಯಮಂತ್ರಿಗಳ ಜೊತೆಗೆ ವಿಶೇಷ ಹೆಲಿಕಾಪ್ಟರ್ನಲ್ಲಿ ಬೆಳಗಾವಿಗೆ ಬಂದರು. ಬೀಳಗಿಯಿಂದಲೇ ಸ್ಪರ್ಧಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
`ಯಾವುದೇ ಕಾರಣಕ್ಕೂ ಪಕ್ಷ ಬಿಡಬಾರದು ಹಾಗೂ ಇಲ್ಲಿಂದಲೇ ಸ್ಪರ್ಧಿಸಬೇಕು ಎಂದು ಬೀಳಗಿ ಮತಕ್ಷೇತ್ರದ ಕಾರ್ಯಕರ್ತರು ಕಣ್ಣೀರಿಟ್ಟರು. ಕಾರ್ಯಕರ್ತರ ಅಭಿಮಾನಕ್ಕೆ ತಲೆಬಾಗಿದ್ದೇನೆ. ಆದ್ದರಿಂದ ಬೀಳಗಿಯಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ' ಎಂದು ನಿರಾಣಿ ತಿಳಿಸಿದರು.
`ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ನಮ್ಮ ನಾಯಕರು. ಆದರೆ, ಪಕ್ಷದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಕೆಲವು ನಿರ್ಧಾರ ಮಾಡಿದ್ದೆ. ಈಗ ಅವೆಲ್ಲ ನಿರ್ಧಾರಗಳನ್ನು ಬದಿಗಿಟ್ಟಿದ್ದು, ಬಿಜೆಪಿಯಲ್ಲಿಯೇ ಮುಂದುವರಿಯುತ್ತೇನೆ' ಎಂದು ನಿರಾಣಿ ಸ್ಪಷ್ಟಪಡಿಸಿದರು.