ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲೂ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚು ನೀರು ಬರತೊಡಗಿದೆ.
ದಕ್ಷಿಣ ಕನ್ನಡದಲ್ಲಿ ಮಳೆರಾಯನ ಅಟಾಟೋಪ ಮಂಗಳವಾರವೂ ಮುಂದುವರಿದಿದೆ. ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿ ಕರೋಪಾಡಿ ಗ್ರಾಮದ ಬಳಿ ಆನೆಕಲ್ಲು ನದಿಗೆ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟೆ ಭಾಗಶಃ ಕೊಚ್ಚಿ ಹೋಗಿದೆ. ನದಿ ತಟದ ಕೃಷಿ ಭೂಮಿ ಜಲಾವೃತವಾಗಿದೆ. ಒಂದು ಎಕರೆಯಲ್ಲಿದ್ದ 300 ಅಡಿಕೆ ಮರಗಳು, 60 ತೆಂಗಿನ ಮರಗಳು ನೀರು ಪಾಲಾಗಿವೆ. ಗ್ರಾಮ ಕರಣಿಕರು ಸ್ಥಳಕ್ಕೆ ಭೇಟಿ ನೀಡಿದ್ದು ಹಾನಿ ಆಂದಾಜು ಮಾಡುತ್ತಿದ್ದಾರೆ. ಮಂಗಳೂರು ನಗರದ ಮೂರು ಬಡಾವಣೆಗಳಲ್ಲಿ ಮರಗಳು ಬುಡಮೇಲಾಗಿವೆ.
ಉಡುಪಿ ಜಿಲ್ಲೆಯಲ್ಲಿ ಎರಡು ದಿನದಿಂದ ಸುರಿಯುತ್ತಿದ್ದ ವರ್ಷಧಾರೆ ಮಂಗಳವಾರ ಬೆಳಿಗ್ಗೆಯಿಂದ ಇಳಿಮುಖವಾಗಿದೆ. ತುಂತುರು ಮಳೆ ಹೊರತು ದಿನವಿಡೀ ಬಿಸಿಲಿತ್ತು. ಕಾರ್ಕಳದಲ್ಲಿ ಅತಿ ಹೆಚ್ಚು 226.2 ಮಿ.ಮೀ. ಮಳೆಯಾಗಿದ್ದು, ಕುರ್ಕಾಲು ಗ್ರಾಮದಲ್ಲಿ ಮರಬಿದ್ದು ಮನೆ ಜಖಂಗೊಂಡಿದೆ.
ಉಡುಪಿಯಲ್ಲಿ 154, ಕುಂದಾಪುರ ತಾಲ್ಲೂಕಿನಲ್ಲಿ 53.6 ಮಿ.ಮೀ. ಮಳೆಯಾಗಿದೆ. ಕರಾವಳಿ ತೀರ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ತಾಸಿಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.