ಮಸ್ಕಿ (ರಾಯಚೂರು ಜಿಲ್ಲೆ): ಪಟ್ಟಣದಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯಿತು. ವಾರದ ಸಂತೆ ಇದ್ದುದರಿಂದ ತರಕಾರಿ, ಧಾನ್ಯ ಕೊಚ್ಚಿ ಹೋದವು. ಇದರಿಂದ ರೈತರು, ವ್ಯಾಪಾರಿಗಳಿಗೆ ನಷ್ಟವಾಯಿತು.
ಕವಿತಾಳ ಪಟ್ಟಣದಲ್ಲೂ ಧಾರಾಕಾರ ಮಳೆ ಆಯಿತು. ಬೆಳಗಾವಿ ವರದಿ: ಬೆಳಗಾವಿ ಜಿಲ್ಲೆಯ ವಿವಿಧೆಡೆ ಭಾನುವಾರ ಕೆಲಕಾಲ ಉತ್ತಮ ಮಳೆಯಾಗಿದೆ.
ನಗರದಲ್ಲಿ ಮಧ್ಯಾಹ್ನ ಗುಡುಗುಸಹಿತ ಬಿರುಸಿನ ಮಳೆಯಾಗಿದೆ. ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ, ರಾಯಬಾಗ ತಾಲ್ಲೂಕಿನ ಹಾರೊಗೇರಿ, ಚನ್ನಮ್ಮನ ಕಿತ್ತೂರಿನಲ್ಲಿ ಒಂದು ತಾಸು ಮಳೆಯಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದು, ಕೃಷ್ಣಾ ನದಿಗೆ ಹರಿದು ಬರುತ್ತಿ‘ರುವ ನೀರಿನ ಪ್ರಮಾಣ ತಗ್ಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಸೇತುವೆ ಭಾನುವಾರ ಬೆಳಿಗ್ಗೆಯಿಂದ ಸಂಚಾರಕ್ಕೆ ಮುಕ್ತವಾಗಿದೆ.ಇದರೊಂದಿಗೆ, ಮುಳುಗಡೆಯಾಗಿದ್ದ ಚಿಕ್ಕೋಡಿ ತಾಲ್ಲೂಕಿನ ಆರೂ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಂತಾಗಿದೆ.
ಗದಗ, ನರೇಗಲ್, ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಉತ್ತಮ ಮಳೆಯಾಗಿದೆ. ದಾವಣಗೆರೆ ವರದಿ: ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾನುವಾರ ಸಂಜೆ ಗುಡುಗು, ಮಿಂಚಿನೊಂದಿಗೆ ಧಾರಾಕಾರವಾಗಿ ಮಳೆ ಸುರಿಯಿತು.
ದಾವಣಗೆರೆಯಲ್ಲಿ ಸಂಜೆ ಮೂರು ತಾಸಿಗೂ ಹೆಚ್ಚು ಸಮಯ ಸತತವಾಗಿ ಸುರಿದ ಮಳೆಯಿಂದಾಗಿ ವಾಹನಗಳ ಹಾಗೂ ಜನರ ಸಂಚಾರಕ್ಕೆ ತೊಂದರೆ ಉಂಟಾಯಿತು. ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ ತಾಲ್ಲೂಕುಗಳಲ್ಲಿಯೂ ನಿರಂತರವಾಗಿ ಮಳೆ ಸುರಿಯಿತು.