ವಿಜಯಪುರ: ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಖಂಡಾಲ ಬಳಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿಜಯಪುರ ಜಿಲ್ಲೆಯ 18 ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 17ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗಠಾಣ, ಹಡಗಲಿ, ರಾಜನಾಳ, ಮದಬಾವಿ, ಕೂಡಗಿ ತಾಂಡಾದ ಕೂಲಿ ಕಾರ್ಮಿಕರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ಸಾತಾರ, ಖಂಡಾಲ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ತಿಳಿಸಿದರು.
‘ಪುಣೆ ಜಿಲ್ಲೆಯ ಬೋರ ಎಂಬಲ್ಲಿ ಕೆಲಸ ಹುಡುಕಿಕೊಂಡಿದ್ದ ಈ ಎಲ್ಲರೂ, ತಮ್ಮ ಮೇಸ್ತ್ರಿ ನೇತೃತ್ವದಲ್ಲಿ ಸೋಮವಾರ ರಾತ್ರಿ ತಿಕೋಟಾದಿಂದ ಟೆಂಪೊದಲ್ಲಿ ಪ್ರಯಾಣ ಬೆಳೆಸಿದ್ದರು. ಮಂಗಳವಾರ ನಸುಕಿನ 4.45ರ ವೇಳೆ ಅಪಘಾತಕ್ಕೀಡಾಗಿದೆ’ ಎಂದು ನಿಕ್ಕಂ ತಿಳಿಸಿದರು.