ಬಸವಕಲ್ಯಾಣ (ಬೀದರ್ ಜಿಲ್ಲೆ): ತಹಶೀಲ್ದಾರ್ ಕಚೇರಿಯ ಶಿರಸ್ತೇದಾರನೊಬ್ಬ ಮತದಾರರ ಗುರುತಿನ ಚೀಟಿ ಮಾಡಿಸಿಕೊಡುವುದಾಗಿ ಹೇಳಿ ತೆಗೆದುಕೊಂಡಿದ್ದ ₨ 50 ಲಂಚವನ್ನು ಉಪ ಲೋಕಾಯುಕ್ತ ಎಸ್.ಬಿ.ಮಜಗೆ ಅವರು ಗುರುವಾರ ವ್ಯಕ್ತಿಗೆ ಹಿಂದಿರುಗಿಸುವಂತೆ ಮಾಡಿದರು.
ಕಚೇರಿ ಭೇಟಿಗೆ ಮಜಗೆ ಅವರು ಬಂದಾಗ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ‘ಮತದಾರರ ಗುರುತಿನಚೀಟಿ ಮಾಡಿಸಿ ಕೊಡುವುದಕ್ಕಾಗಿ ಶಿರಸ್ತೇದಾರ್ ಶ್ರೀಶೈಲ ₨50 ಲಂಚವನ್ನು ಪಡೆದಿದ್ದಾರೆ’ ಎಂದು ದೂರಿದರು. ಆಗ ಮಜಗೆ ಅವರು ‘ಹಣವನ್ನು ತಕ್ಷಣ ವಾಪಸು ನೀಡಬೇಕು, ಮುಂದೆ ಲಂಚವನ್ನು ತೆಗೆದುಕೊಳ್ಳಬಾರದು’ ಎಂದು ಶ್ರೀಶೈಲ ಅವರಿಗೆ ತಾಕೀತು ಮಾಡಿದರು.
ಹಣ ಹಿಂದಿರುಗಿಸಿದ ಶ್ರೀಶೈಲ ಗಾಬರಿಗೊಂಡರು. ಮೈ ಬೆವರಿತು. ತಲೆ ಸುತ್ತಿ ನೆಲದ ಮೇಲೆ ಕುಳಿತುಕೊಂಡರು. ಬಳಿಕ ಸುಧಾರಿಸಿಕೊಂಡು ‘ನನಗೆ ಏಳು ತಿಂಗಳಿಂದ ಸಂಬಳವೇ ಆಗಿಲ್ಲ. ಸಂಕಟ ಅನುಭವಿಸುತ್ತಿದ್ದೇನೆ. ಸಂಬಳವನ್ನು ಕೊಡಿಸಬೇಕು’ ಎಂದು ಮಜಗೆ ಅವರಿಗೆ ವಿನಂತಿಸಿದರು.
ಅವರ ಪರಿಸ್ಥಿತಿ ಕಂಡು ಮಜಗೆ ಕನಿಕರಪಟ್ಟು ತಕ್ಷಣವೇ ತಹಶೀಲ್ದಾರ್ ಪಲ್ಲವಿ ಬೆಳಕೇರೆ ಅವರನ್ನು ಕರೆದು ಸಂಬಳವನ್ನು ನೀಡುವಂತೆ ಸೂಚಿಸಿದರು.
‘ಶ್ರೀಶೈಲ ಬೇರೆಡೆಯಿಂದ ಇಲ್ಲಿಗೆ ವರ್ಗವಾಗಿ ಬಂದಿದ್ದು ಅವರ ಸಂಬಳದ ಚೆಕ್ ಉಪ ಖಜಾನೆ ಅಧಿಕಾರಿಗಳ ಕಚೇರಿಯಲ್ಲಿದೆ. ಅದನ್ನು ತರಿಸಬೇಕಾಗಿದೆ’ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು. ಕೂಡಲೇ ₨70 ಸಾವಿರ ಚೆಕ್ ತರಿಸಿಕೊಟ್ಟರು.
ಪಟ್ಟಣಕ್ಕೆ ಬೆಳಿಗ್ಗೆ ಬಂದ ಉಪ ಲೋಕಾಯುಕ್ತರು ಸಂಜೆಯತನಕ ಇದ್ದರು. ಆ ಕಡೆ ಈ ಕಡೆ ಹೋದಂತೆ ಮಾಡಿ ತಹಶೀಲ್ದಾರ್ ಕಚೇರಿಗೆ ಮೂರು ಸಲ ಭೇಟಿ ನೀಡಿದರು.
ಕಚೇರಿಯ ವರಾಂಡದಲ್ಲಿ ನಿಂತಿದ್ದ ಜನರನ್ನು ಮಾತನಾಡಿಸಿ ‘ಇಲ್ಲಿಗೆ ಏತಕ್ಕೆ ಬಂದಿದ್ದೀರಾ? ಏನು ಕೆಲಸ ಇದೆ?’ ಎಂದು ಪದೇ ಪದೇ ವಿಚಾರಿಸಿದರು.