ಬೆಂಗಳೂರು: ರಾಜಧಾನಿ ಹೊರತುಪಡಿಸಿ ರಾಜ್ಯದ ಎಲ್ಲ ಕಡೆ ಸೋಮವಾರದಿಂದ ಅನಿಯಮಿತ ವಿದ್ಯುತ್ ಕಡಿತ ಜಾರಿಯಾಗಿದೆ. ಒಂದೆಡೆ ಜಿಂದಾಲ್ ಘಟಕದಿಂದ ಪೂರೈಕೆಯಾಗುತ್ತಿದ್ದ ವಿದ್ಯುತ್ನಲ್ಲಿ 300 ಮೆಗಾವಾಟ್ ಖೋತಾ ಆಗಿದ್ದರೆ, ಮತ್ತೊಂದೆಡೆ ಬೇಡಿಕೆ ಪ್ರಮಾಣ ಹೆಚ್ಚಾಗಿದೆ.
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮಾರ್ಚ್ವರೆಗೂ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸಾಧ್ಯವಿಲ್ಲ. ಒಂದು ವೇಳೆ ಹೆಚ್ಚುವರಿಯಾಗಿ 500 ಮೆಗಾವಾಟ್ ವಿದ್ಯುತ್ ಖರೀದಿ ಮಾಡಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ಬೇಡಿಕೆ ಪ್ರಮಾಣ 170 ದಶಲಕ್ಷ ಯೂನಿಟ್ಗೆ ಏರಿದೆ. ಆದರೆ ಈ ಪ್ರಮಾಣದಲ್ಲಿ ವಿದ್ಯುತ್ ನೀಡಲು ಆಗುತ್ತಿಲ್ಲ. ಭಾನುವಾರ 161 ದಶಲಕ್ಷ ಯೂನಿಟ್ ಪೂರೈಕೆಯಾಗಿದೆ. ಈ ಬಾರಿ ಬೇಡಿಕೆ ಪ್ರಮಾಣ 180 ದಶಲಕ್ಷ ಯೂನಿಟ್ಗೆ ಏರುವ ನಿರೀಕ್ಷೆ ಇದೆ.