ಮಲೇಬೆನ್ನೂರು: ಸಮೀಪದ ನಂದಿಗುಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 66 ಮಕ್ಕಳು ಶನಿವಾರ ಅಸ್ವಸ್ಥರಾದ ಘಟನೆ ಸಂಭವಿಸಿದೆ.
ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ ಮಕ್ಕಳು ಶನಿವಾರ ಬೆಳಗಿನ ಶಾಲೆಯ ಪ್ರಾರ್ಥನೆಗೆ ಬಾರದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಶಿಕ್ಷಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ ವೈದ್ಯರನ್ನು ಕರೆಸಿದ್ದಾರೆ. ಹೊಟ್ಟೆನೋವು, ಜ್ವರ, ವಾಂತಿಯಿಂದ ತೀವ್ರವಾಗಿ ಅಸ್ವಸ್ಥರಾಗಿದ್ದ 20 ಮಕ್ಕಳಿಗೆ ಗ್ಲುಕೋಸ್ ಹಾಕಿ, ಚುಚ್ಚುಮದ್ದು, ಮಾತ್ರೆ ಕೊಟ್ಟು ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿದ್ದಾರೆ. ಮಕ್ಕಳನ್ನು ಪರೀಕ್ಷಿಸಿದ ಉಕ್ಕಡಗಾತ್ರಿಯ ಡಾ.ಸತೀಶ್ಚಂದ್ರ, ನಂದಿಗುಡಿ ಡಾ.ದೇವರಾಜ್ ಅವರು, ಸೇವಿಸಿದ ಆಹಾರ ವಿಷಪೂರಿತವಾಗಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದರು.
ಮಕ್ಕಳ ಪ್ರತಿಭಟನೆ: ವಸತಿನಿಲಯದ ಮಕ್ಕಳು ಶಾಲೆಗೆ ಶಾಶ್ವತ ನಿಲಯಪಾಲಕರಿಲ್ಲದೆ ಇರುವುದು ಘಟನೆಗೆ ಕಾರಣ. ಆಹಾರ ಪದಾರ್ಥ ಕಲಬೆರೆಕೆಯಿಂದ ಕೂಡಿವೆ. ಅಡುಗೆ ತಯಾರಕರು ಸಮರ್ಪಕವಾಗಿ ಅಡುಗೆ ಮಾಡುತ್ತಿಲ್ಲ. ಅವರನ್ನು ಬದಲಿಸಿ ಎಂದು ಆಗ್ರಹಿಸಿ ಶನಿವಾರ ತಯಾರಿಸಿದ ಊಟ ಮಾಡದೆ ಘೋಷಣೆ ಕೂಗಿ ಧರಣಿ ಆರಂಭಿಸಿದರು.