ಬೆಂಗಳೂರು: ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳಂತೆ ನಿಗದಿಪಡಿಸಲಾದ ಆರು ಮಾರ್ಗಸೂಚಿಗಳಲ್ಲಿ ‘ಬಿ’ ಮತ್ತು ‘ಎಫ್’ಗಳನ್ನು ತಪ್ಪಾಗಿ ಅರ್ಥೈಸಿ ಅರ್ಕಾವತಿ ಬಡಾವಣೆಯ ಪರಿಷ್ಕೃತ ಯೋಜನೆಯಡಿ ಹೆಚ್ಚಿನ ಜಮೀನುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
‘ಅಧಿಸೂಚನೆಯಿಂದ ಕೈಬಿಟ್ಟ 983 ಎಕರೆಯಲ್ಲಿ ಶೇಕಡ 95ರಷ್ಟು ಜಮೀನುಗಳು ‘ಬಿ’ ಮತ್ತು ‘ಎಫ್’ ಮಾರ್ಗಸೂಚಿಗಳ ವ್ಯಾಪ್ತಿಗೆ ಬರುತ್ತವೆ ಎಂಬ ಕಾರಣ ನೀಡಲಾಗಿದೆ. ಈ ಎರಡೂ ಮಾರ್ಗಸೂಚಿಗಳನ್ನು ತಮಗೆ ಬೇಕಾದಂತೆ ಅರ್ಥೈಸಿ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡಲಾಗಿದೆ’ ಎಂದು ವಕೀಲ ಕೆ.ದಿಲೀಪ್ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ.ಶ್ಯಾಂಭಟ್ ಮತ್ತಿತರರ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಯೋಜನೆಯಿಂದ ಕೈಬಿಟ್ಟಿರುವ ಶೇಕಡ 60ರಿಂದ 70ರಷ್ಟು ಜಮೀನು ‘ಎಫ್’ ಮಾರ್ಗಸೂಚಿಯ ವ್ಯಾಪ್ತಿಗೆ ಬರುತ್ತದೆ ಎಂದು ಗುರುತಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಜಮೀನುಗಳನ್ನು ಕೈಬಿಡುವುದಕ್ಕಾಗಿ ಈ ಮಾರ್ಗಸೂಚಿಯನ್ನು ಬಳಸಿಕೊಳ್ಳಲಾಗಿದೆ. ‘ಎಫ್’ ಪ್ರಕಾರ ಈಗಾಗಲೇ ಅಧಿಸೂಚನೆಯಿಂದ ಕೈಬಿಡಲು ಆಧಾರವಾಗಿ ಬಳಸಿದ ಕಾರಣಗಳ ವ್ಯಾಪ್ತಿಗೆ ಬರುವ ಜಮೀನುಗಳನ್ನು ಕೈಬಿಡಲು ಅವಕಾಶ ಇತ್ತು ಎಂದು ಉಲ್ಲೇಖಿಸಿದ್ದಾರೆ.
ಹಿಂದೆ ಡಿನೋಟಿಫಿಕೇಷನ್ಗೆ ಆಧಾರವಾಗಿದ್ದ ಸಮಾನ ಕಾರಣಗಳ ವ್ಯಾಪ್ತಿಗೆ ಈ ಜಮೀನುಗಳು ಬರುತ್ತವೆಯೇ ಎಂಬುದನ್ನು ಪರಿಶೀಲಿಸಿ, ವರದಿ ಮಾಡುವ ಜವಾಬ್ದಾರಿಯನ್ನು ಬಿಡಿಎ ಅಧಿಕಾರಿಗಳೇ ನಿರ್ವಹಿಸಬೇಕಿತ್ತು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳನ್ನು ಅವರು ಪಾಲಿಸಿಲ್ಲ ಎಂದು ದೂರಿದ್ದಾರೆ. ‘ಬಿ’ ಮಾರ್ಗಸೂಚಿಯ ಪ್ರಕಾರ ಈಗಾಗಲೇ ಕಟ್ಟಡಗಳಿರುವ ಪ್ರದೇಶವನ್ನು ಕೈಬಿಡಲು ಅವಕಾಶ ಇತ್ತು. ಅದನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಘಕ್ಕೆ ಅಕ್ರಮವಾಗಿ ಜಮೀನು: ಹೈಕೋರ್ಟ್ ಆದೇಶದ ಪ್ರಕಾರ, ಅರ್ಕಾವತಿ ಬಡಾವಣೆಗೆ ಗುರುತಿಸಿದ್ದ ಪ್ರದೇಶದಲ್ಲಿ ಕಂದಾಯ ನಿವೇಶನಗಳನ್ನು ಖರೀದಿಸಿರುವವರಿಗೆ ಪರ್ಯಾಯ ನಿವೇಶನ ನೀಡಲು ಅವಕಾಶ ಇತ್ತು. ಅವರು ಹೊಂದಿರುವ ನಿವೇಶನಗಳನ್ನು ಮರುಮಂಜೂರು ಮಾಡಲು ಅವಕಾಶ ಇರಲಿಲ್ಲ. ಆದರೆ, ಈ ಆದೇಶ ಉಲ್ಲಂಘಿಸಿ ಖಾದಿ ಗ್ರಾಮೋದ್ಯೋಗ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 12 ಎಕರೆ 10 ಗುಂಟೆ ಜಮೀನನ್ನು ವಾಪಸು ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘ಬಿಡಿಎ ಅಧಿಕಾರಿಗಳು ಮನಸೋಇಚ್ಛೆ ನಿರ್ಧಾರ ತೆಗೆದುಕೊಂಡು ಜಮೀನುಗಳನ್ನು ಕೈಬಿಟ್ಟಿದ್ದಾರೆ. ಇದರಿಂದ ಬಿಡಿಎಗೆ ₹10 ಸಾವಿರ ಕೋಟಿ ನಷ್ಟವಾಗಿದೆ. ಮುಖ್ಯಮಂತ್ರಿಯವರೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಇತರೆ ಆರೋಪಗಳು
* ಮಾನ್ಯತಾ ಡೆವಲಪರ್ಸ್ನ ತೇಜರಾಜ್ ಗುಲೇಚಾ ಅವರಿಗೆ ಮಾರಾಟವಾಗಿದ್ದ 37 ಗುಂಟೆ ಜಮೀನನ್ನು ಅಕ್ರಮವಾಗಿ ಕೈಬಿಟ್ಟಿರುವುದು.
* ಬಿಡಿಎ ಆಡಳಿತ ಮಂಡಳಿಯ 57/11ನೇ ಸಭೆಯ ನಿರ್ಣಯನ್ನು ತಪ್ಪಾತಿ ಅರ್ಥೈಸಿ 26 ಎಕರೆ ಡಿನೋಟಿಫಿಕೇಷನ್
* ಬಿಡಿಎ ಹೈಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ವಿರುದ್ಧವಾಗಿ ಕೆಂಪಾಪುರ ಮತ್ತು ಶ್ರೀರಾಮಪುರ ಗ್ರಾಮಗಳ ಜಮೀನುಗಳ ಡಿನೋಟಿಫೈ.
* ಕಂದಾಯ ನಿವೇಶನಗಳಿದ್ದ 16 ಎಕರೆ 22 ಗುಂಟೆ ಜಮೀನುಗಳನ್ನು ಕಾನೂನುಬಾಹಿರವಾಗಿ ಕೈಬಿಟ್ಟಿರುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.