ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಭಾರಿ ಸಿಡಿಲಿನಿಂದ ಕೂಡಿದ ಮಳೆ ಸುರಿದಿದೆ.
ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಯಲ್ಲಿ ಸಿಡಿಲು ಬಡಿದು ಪ್ರಶಾಂತ್ (14) ಎಂಬಾತ ಮೃತಪಟ್ಟಿದ್ದಾನೆ.
ಮನೆಯಲ್ಲಿದ್ದ ಆತನ ತಾಯಿ ರಾಧಾ ಗಂಭೀರವಾಗಿ ಗಾಯ ಗೊಂಡಿದ್ದಾರೆ. ಮನೆಯಲ್ಲಿದ್ದ ಹಸು ಕೂಡಾ ಸಿಡಿಲಿಗೆ ಬಲಿಯಾಗಿದೆ. ವಿಟ್ಲ ಸಮೀಪದ ಕಾಂತಡ್ಕ ಜಮಾಲಿಲ್ ಲೈಲಿ ಅಲ್ ಬದ್ರಿಯಾ ಜುಮಾ ಮಸೀದಿಗೆ ಮತ್ತು ಮದರಸಕ್ಕೆ ಸಿಡಿಲು ಬಡಿದು ಶಿಕ್ಷಕ ಮತ್ತು ಎಂಟು ಮಂದಿ ಮಕ್ಕಳು ಗಾಯಗೊಂಡಿದ್ದಾರೆ. ಮದರಸದಲ್ಲಿ 65 ಮಕ್ಕಳು ಕಲಿಯುತ್ತಿದ್ದರು.
ಬಂಟ್ವಾಳ, ಸುಳ್ಯ, ಪುತ್ತೂರು ಸಹಿತ ಜಿಲ್ಲೆಯ ಹಲವೆಡೆ ಭಾನುವಾರವೂ ಸಿಡಿಲಿನಿಂದ ಕೂಡಿದ ಮಳೆ ಸುರಿದಿದೆ.