ಹರಪನಹಳ್ಳಿ: ತಾಲ್ಲೂಕಿನ ಹುಣಸಿಹಳ್ಳಿ ಗ್ರಾಮದ ಬಳಿ ಸೋಮವಾರ ಸಂಜೆ ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟಿದ್ದು, 12 ಮೇಕೆಗಳು ಅಸುನೀಗಿವೆ.
ಹೊಸ ಓಬಳಾಪುರ ಗ್ರಾಮದ ರೇವಣಸಿದ್ದಪ್ಪ (18) ಮೃತ ಕುರಿಗಾಹಿ. ರೇವಣಸಿದ್ದಪ್ಪ ಕುರಿ ಹಾಗೂ ಮೇಕೆಗಳನ್ನು ಮೇಯಿಸುತ್ತಾ ಹುಣಸಿಹಳ್ಳಿ ಗ್ರಾಮದ ಬಳಿ ಬಂದಾಗ ಸಂಜೆ 6.45ರ ಸುಮಾರಿಗೆ ಸಿಡಿಲು ಬಡಿದಿದೆ.
ಗಾಳಿ–ಮಳೆ: ದಾವಣಗೆರೆ ನಗರದಲ್ಲಿ ಸಂಜೆ ಬಿರುಗಾಳಿ ಬೀಸಿದ್ದರಿಂದ ಚರ್ಚ್ ರಸ್ತೆ ಹಾಗೂ ನಿಟುವಳ್ಳಿ ಮುಖ್ಯರಸ್ತೆಯಲ್ಲಿ ಮರದ ಬೃಹತ್ ಟೊಂಗೆಗಳು ಮುರಿದು ಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಳಿಕ ಕೆಲ ಕಾಲ ಮಳೆ ಸುರಿಯಿತು.
ಹರಿಹರದಲ್ಲೂ ಬಿರುಗಾಳಿಯಿಂದ ಜಾಹೀರಾತು ಹೋರ್ಡಿಂಗ್ ಬಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಬಳ್ಳಾರಿ ನಗರದಲ್ಲಿ ಸೋಮವಾರ ಸಂಜೆ ಕೆಲ ಕಾಲ ಗುಡುಗಿನಿಂದ ಕೂಡಿದ ಮಳೆ ಸುರಿಯಿತು. ಸಂಜೆ 4ರ ವೇಳೆಗೆ ಆರಂಭವಾದ ಮಳೆ ಸುಮಾರು ಹತ್ತು ನಿಮಿಷಗಳ ಕಾಲ ಸುರಿಯಿತು.