ಬೆಂಗಳೂರು: ತಾವಾಗಲೀ, ತಮ್ಮ ಸಹೋದರ ಸುರೇಶ್ ಅವರಾಗಲೀ ಕನಕಪುರದಲ್ಲಿ ಯಾವುದೇ ರೀತಿಯ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಅಕ್ರಮದಲ್ಲಿ ಭಾಗಿಯಾದ ಬಗ್ಗೆ ದಾಖಲೆಗಳಿದ್ದರೆ ಸರ್ಕಾರ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ಶಾಸಕ ಡಿ.ಕೆ.ಶಿವಕುಮಾರ್ ಸಚಿವ ಯೋಗೇಶ್ವರ್ ಅವರಿಗೆ ಸವಾಲು ಹಾಕಿದರು.
ಸಚಿವರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್, `ನಮ್ಮ ಕುಟುಂಬದ ಯಾವುದೇ ಸದಸ್ಯರೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸದಂತೆ ನಾನಾಗಲೀ, ನನ್ನ ಬೆಂಬಲಿಗರಾಗಲೀ ಸಚಿವರಿಗೆ ಬೆದರಿಕೆ ಹಾಕಿಲ್ಲ~ ಎಂದು ಹೇಳಿದರು.
`ನಾವು ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ದಾಖಲೆಗಳಿದ್ದರೆ ಸಚಿವರು, ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಲಿ. ತನಿಖೆ ನಡೆಸದಂತೆ ಬೆದರಿಕೆ ಹಾಕಿರುವ ಬಗ್ಗೆ ಸಾಕ್ಷ್ಯವಿದ್ದರೂ ಪೊಲೀಸರಿಗೆ ದೂರು ನೀಡಲಿ. ಬೆದರಿಕೆ ಹಾಕಿರುವ ಕುರಿತು ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸಚಿವರು ಜಲ್ಲಿ ಕ್ರಷರ್ ಮಾಲೀಕರಿಂದ ಹಫ್ತಾ ವಸೂಲಿ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ನಾನು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದೆ. ಈ ಕಾರಣಕ್ಕಾಗಿಯೇ ಯೋಗೇಶ್ವರ್ ಅವರು ನಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ~ ಎಂದು ದೂರಿದರು.