ಸತತ ಬರದಿಂದ, ಜಿಲ್ಲೆಯ ಲಂಬಾಣಿ ತಾಂಡಾಗಳಿಂದ ಹಲವರು ಕೆಲಸ ಹುಡುಕಿಕೊಂಡು ಗೋವಾಕ್ಕೆ ಗುಳೆ ಹೋಗಿದ್ದಾರೆ. ಈ ಭಾಗದ ಸೂರಣಗಿ, ಸುವರ್ಣಗಿರಿ, ಉಂಡೇನಹಳ್ಳಿ, ಹರದಗಟ್ಟಿ, ಅಡರಕಟ್ಟಿ, ಶೆಟ್ಟಿಕೇರಿ, ಉಳ್ಳಟ್ಟಿ, ಮುನಿಯನ ತಾಂಡಾಗಳಿಂದಲೂ ಸಾವಿರಾರು ಮಂದಿ ಅಲ್ಲಿಗೆ ಹೋಗಿದ್ದರು. ಆದರೆ, ಇತ್ತೀಚೆಗೆ ಗೋವಾದ ಬೈನಾ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರ 55 ಮನೆಗಳನ್ನು ಅಲ್ಲಿನ ಸರ್ಕಾರ ತೆರವುಗೊಳಿಸಿದ್ದರಿಂದ, ಅವರೆಲ್ಲ ಊರಿಗೆ ಮರಳಿದ್ದಾರೆ.