ಬೆಂಗಳೂರು: ನಗರದಲ್ಲಿ 2013ರಲ್ಲಿ ನಡೆದ ಮಲ್ಲೇಶ್ವರ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವತಿ ಲಿಷಾ ಅವರು ₹ 1 ಕೋಟಿ ಪರಿಹಾರಕ್ಕೆ ಒತ್ತಾಯಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪರಿಹಾರ ಹಣದ ಜತೆಗೆ ಸರ್ಕಾರ ಅಂಗವಿಕಲ ಕೋಟಾದಡಿ ಉದ್ಯೋಗ ನೀಡಬೇಕು. ಮುಂದಿನ ವೈದ್ಯಕೀಯ ವೆಚ್ಚ ಭರಿಸಬೇಕು. ಭಯೋತ್ಪಾದಕ ದಾಳಿಗೆ ತುತ್ತಾದವರಿಗೆ ಪರಿಹಾರ ನೀಡಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಲಿಷಾ ಮನವಿ ಮಾಡಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿದೆ.
ಸ್ಫೋಟ ಸಂಭವಿಸಿದ ವೇಳೆ ಬಿಜೆಪಿ ಕಚೇರಿ ಎದುರು ನಡೆದು ಹೋಗುತ್ತಿದ್ದ ಲಿಷಾ ಮತ್ತು ಅವರ ಸಹಪಾಠಿ ರಕ್ಷಿತಾ ಗಾಯಗೊಂಡಿದ್ದರು. ಲಿಷಾ ಅವರ ಎಡಗಾಲಿಗೆ ಹಾಗೂ ರಕ್ಷಿತಾ ಅವರ ಬಲಗಾಲಿನ ಪಾದಕ್ಕೆ ತೀವ್ರ ಪೆಟ್ಟಾಗಿತ್ತು.