ಕಂಪಾಲ (ಪಿಟಿಐ): ಭಾರತದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್ಎಫ್ಎಸ್ಯು) ಮೊದಲನೇ ಸಾಗರೋತ್ತರ ಕ್ಯಾಂಪಸ್ ಅನ್ನು ಉಗಾಂಡದ ಜಿಂಜಾದಲ್ಲಿ ತೆರೆಯಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಉಪಸ್ಥಿತಿಯಲ್ಲಿ ಈ ಕ್ಯಾಂಪಸ್ನ ಉದ್ಘಾಟನೆಯನ್ನು ಬುಧವಾರ ನೆರವೇರಿಸಲಾಯಿತು.
‘ಉಗಾಂಡದ ಉಗಾಂಡನ್ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಸಹಭಾಗಿತ್ವದಲ್ಲಿ ಈ ಕ್ಯಾಂಪಸ್ ತೆರೆಯಲಾಗಿದೆ. ನಮ್ಮ ದ್ವಿಪಕ್ಷೀಯ ಸಹಯೋಗದ ಮಹತ್ವದ ಮೈಲುಗಲ್ಲು ಸಾಧನೆಗೆ ಸಾಕ್ಷಿಯಾಗಲು ನಾವಿಲ್ಲಿ ಸೇರಿದ್ದೇವೆ. ಎರಡೂ ದೇಶಗಳು ಹೆಮ್ಮೆಪಡುವ ದಿನ ಇದು’ ಎಂದು ಉದ್ಘಾಟನಾ ಸಮಾರಂಭದಲ್ಲಿ ಜೈಶಂಕರ್ ಹೇಳಿದರು.
‘ವಿದೇಶದಲ್ಲಿ ಕ್ಯಾಂಪಸ್ ತೆರೆಯುತ್ತಿರುವ ಭಾರತದ ಮೊದಲ ಸರ್ಕಾರಿ ವಿಶ್ವವಿದ್ಯಾಲಯ ಇದಾಗಿದೆ. ನಾನು ಸಂಸತ್ತನ್ನು ಪ್ರತಿನಿಧಿಸುವ ಗುಜರಾತ್ ರಾಜ್ಯದಲ್ಲೇ ಈ ವಿಶ್ವವಿದ್ಯಾಲಯ ಇರುವುದು ನನ್ನ ಸಂಭ್ರಮವನ್ನು ಹೆಚ್ಚಿಸಿದೆ’ ಎಂದು ಹೇಳಿದರು.
ಉಗಾಂಡದ ಉಪ ಪ್ರಧಾನಿ, ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಜೈಶಂಕರ್ ಅವರು ಏಪ್ರಿಲ್ 10ರಿಂದ 15ರ ವರೆಗೆ ಉಗಾಂಡ ಮತ್ತು ಮೊಜಾಂಬಿಕ್ ಪ್ರವಾಸದಲ್ಲಿದ್ದಾರೆ.