ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಸಂಘರ್ಷ ಇತ್ಯರ್ಥಗೊಳ್ಳದಿರಲು ಮುಷರಫ್‌ ಕಾರಣ: ಷರೀಫ್‌ ಬೆಂಬಲಿಗ ಆರೋಪ

Last Updated 9 ಜುಲೈ 2019, 3:33 IST
ಅಕ್ಷರ ಗಾತ್ರ

ಲಾಹೋರ್‌: ‘ನಾಗರಿಕ ಸರ್ಕಾರದ ಅನುಮತಿ ಪಡೆಯದೇ, ಆಗಿನ ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್‌ ಮುಷರಫ್‌ ಅವರೇ ಕಾರ್ಗಿಲ್‌ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಕಾಶ್ಮೀರದ ಈಗಿನ ಸ್ಥಿತಿಗೆ ಅವರೇ ಕಾರಣ’ ಎಂದು ಪಾಕಿಸ್ತಾನ್‌ ಮುಸ್ಲಿಂ ಲೀಗ್‌ – ನವಾಜ್‌ ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ಷರೀಫ್‌ ಆಪ್ತ ಪರ್ವೇಜ್‌ ರಷೀದ್‌ ಆರೋಪಿಸಿದ್ದಾರೆ.

‘ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ನವಾಜ್‌ ಷರೀಫ್‌ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿತ್ತು. ಪರ್ವೇಜ್‌ ಮುಷರಫ್‌, ಎರಡು ರಾಷ್ಟ್ರಗಳ ಮಾತುಕತೆಯನ್ನೇ ನಾಶಪಡಿಸಿ, ಕಾರ್ಗಿಲ್‌ ಕಾರ್ಯಾಚರಣೆ ನಡೆಸಿ, ಷರೀಫ್‌ ಸರ್ಕಾರವನ್ನೇ ಉರುಳಿಸಿದ್ದರು’ ಎಂದು ರಷೀದ್‌ ತಿಳಿಸಿದ್ದಾರೆ.

‘ಕಾಶ್ಮೀರದಲ್ಲಿನ ರಕ್ತಪಾತಕ್ಕೆ ಮುಷರಫ್‌ ಅವರೇ ನೇರ ಕಾರಣ. ಕಾಶ್ಮೀರಿಗಳು ಈಗಲೂ ನೋವು ಅನುಭವಿಸುತ್ತಿರುವುದಕ್ಕೆ ಅವರೇ ಕಾರಣವಾಗಿದ್ದು, ಈ ವಿಷಯ ಇತ್ಯರ್ಥಪಡಿಸಲು ಮುಂದಾಗಿಲ್ಲ, ಕಾರ್ಗಿಲ್‌ ಕಾರ್ಯಾಚರಣೆ ನಡೆಸಿದ್ದು ದುರಾದೃಷ್ಟ’ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

‘ಲಾಹೋರ್‌ಗೆ ಭೇಟಿ ನೀಡಿದ್ದ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಿನಾರ್‌–ಇ–ಪಾಕಿಸ್ತಾನಕ್ಕೆ ಭೇಟಿ ನೀಡಿ, ಪಾಕಿಸ್ತಾನದ ಬೇಡಿಕೆಗೆ ಒಪ್ಪಿದ್ದರು, ಇದರ ಮಧ್ಯದಲ್ಲೇ ಕಾರ್ಗಿಲ್‌ ದುಸ್ಸಾಹಸಕ್ಕೆ ಕೈಹಾಕಿದರು’ ಎಂದು ತಿಳಿಸಿದರು.

1999ರಲ್ಲಿ ಕಾರ್ಗಿಲ್‌ ಯುದ್ಧ ನಡೆದ ವೇಳೆ ಜನರಲ್‌ ಪರ್ವೇಜ್‌ ಮುಷರಫ್‌ ಅವರೇ ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿದ್ದರು. ಪಾಕಿಸ್ತಾನದಲ್ಲಿ ದೇಶದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಅವರು 2016ರಿಂದ ದುಬೈನಲ್ಲೇ ವಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT