ಕಠ್ಮಂಡು: ದಿಢೀರ್ ಪ್ರವಾಹದ ಬಳಿಕ ನಾಪತ್ತೆಯಾಗಿರುವ ನೇಪಾಳದ ಯಾತ್ರಿಗಳ ಪತ್ತೆಗೆ ನೆರವು ನೀಡಬೇಕು ಎಂದು ನೇಪಾಳದ ವಿದೇಶಾಂಗ ಸಚಿವ ಎನ್.ಪಿ.ಸೌದ್ ಅವರು ಉತ್ತರಾಖಂಡದ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಕೇದಾರನಾಥ ದೇವಸ್ಥಾನದ ಪ್ರದೇಶದಲ್ಲಿ ಯಾತ್ರಿಗಳು ತಂಗಿದ್ದರು. ಪ್ರವಾಹದ ಬಳಿಕ ನಾಪತ್ತೆಯಾಗಿದ್ದಾರೆ. ಇವರ ಶೋಧ ಕಾರ್ಯಕ್ಕೆ ಸಹಕಾರ ಬೇಕಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕೋರಿದ್ದಾರೆ.
ಧಾರಾಕಾರ ಮಳೆಯಿಂದ ಪ್ರವಾಹ ಕಂಡುಬಂದಿದ್ದು, ರುದ್ರಪ್ರಯಾಗ ಜಿಲ್ಲೆಯ ಗೌರಿ ಕುಂಡ ಬಳಿ ಗುರುವಾರ ರಾತ್ರಿ ಭೂಕುಸಿದಿತ್ತು. 19 ಯಾತ್ರಿಗಳು ನಾಪತ್ತೆಯಾಗಿದ್ದು, ಇವರಲ್ಲಿ 11 ಮಂದಿ ನೇಪಾಳಿಗರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅವಘಡದ ನಂತರ ಮೂವರು ನೇಪಾಳಿಗರದ್ದು ಸೇರಿ ಏಳು ಮಂದಿಯ ಶವಗಳು ಪತ್ತೆಯಾಗಿವೆ. ಉತ್ತರಾಖಂಡ ಮುಖ್ಯಮಂತ್ರಿ ಅವರು, ಶೋಧ ಕಾರ್ಯಕ್ಕಾಗಿ ಈಗಾಗಲೇ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.