ನ್ಯೂಯಾರ್ಕ್: ಏಕತೆ ಮತ್ತು ಜಾಗತಿಕ ಸಹಯೋಗಕ್ಕಿರುವ ಭಾರತದ ಬದ್ಧತೆಯನ್ನು ಬಿಂಬಿಸುವ ಸಲುವಾಗಿ ‘ವಸುಧೈವ ಕುಟುಂಬಕಂ’ ಎಂಬ ಬರಹವಿರುವ ಫಲಕವನ್ನು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದೆ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು (ಐಸಿಸಿಆರ್) ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಮತ್ತು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೊಜ್ ಅವರು ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಫಲಕವನ್ನು ಅನಾವರಣಗೊಳಿಸಿದರು.
ಚಿನ್ನದ ಬಣ್ಣದ ಫಲಕದಲ್ಲಿ ‘ವಸುಧೈವ ಕುಟುಂಬಕಂ’ ಪದವನ್ನು ಹಿಂದಿಯಲ್ಲಿ ಬರೆಯಲಾಗಿದೆ. ‘ವಿಶ್ವವೇ ಒಂದು ಕುಟುಂಬ’ ಎಂದು ಇಂಗ್ಲಿಷ್ನಲ್ಲೂ ಬರೆಯಲಾಗಿದೆ.
‘ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಕಚೇರಿಯ ಆವರಣದಲ್ಲಿ ಈ ಫಲಕವನ್ನು ಸ್ಥಾಪಿಸಿರುವುದು ಹೆಚ್ಚು ಸೂಕ್ತವಾಗಿದೆ’ ಎಂದು ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ.
ಭಾರತವು ‘ವಸುಧೈವ ಕುಟುಂಬಕಂ’ ತತ್ವವನ್ನು ಬೋಧಿಸುತ್ತಿದೆ ಮತ್ತು ಪಾಲಿಸುತ್ತಿದೆ’ ಎಂದು ರುಚಿರಾ ಕಾಂಬೊಜ್ ತಿಳಿಸಿದ್ದಾರೆ.